ADVERTISEMENT

ಮಡಿಕೇರಿ ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆ

ಕಾಫಿ ಬೆಳೆಗಾರರಿಗೆ ಆತಂಕ, ತೀರ್ಥೋದ್ಭವದ ಸಿದ್ಧತೆಗೂ ಅಡ್ಡಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 13:42 IST
Last Updated 12 ಅಕ್ಟೋಬರ್ 2020, 13:42 IST
ಮಡಿಕೇರಿಯಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು
ಮಡಿಕೇರಿಯಲ್ಲಿ ಸೋಮವಾರ ಧಾರಾಕಾರ ಮಳೆ ಸುರಿಯಿತು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಧಾರಾಕಾರ ಮಳೆಯಾಗುತ್ತಿದೆ. ಸೋಮವಾರ ದಿನವಿಡೀ ಅಲ್ಲಲ್ಲಿ ಧಾರಾಕಾರ ಮಳೆಯಾಗಿದೆ. ಮಡಿಕೇರಿಯಲ್ಲೂ ಮಧ್ಯಾಹ್ನದ ಬಳಿಕ ಜೋರು ಮಳೆ ಸುರಿಯಿತು. ಚರಂಡಿಗಳು ತುಂಬಿ ಹರಿದವು.

ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಅಪ್ಪಂಗಳ, ಚೇರಂಬಾಣೆ, ಅಯ್ಯಂಗೇರಿ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ.

ಇನ್ನೇನು ಮಳೆಗಾಲ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೆ ಮಳೆ ಅಬ್ಬರಿಸುತ್ತಿದ್ದು, ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ಕಾಫಿಗೆ ಕೊಳೆರೋಗ ತಗುಲಿತ್ತು. ಮಳೆ ಬಿಡುವು ನೀಡಿ, ರೋಗ ಸ್ವಲ್ಪ ದೂರವಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಮತ್ತೆ ಆಘಾತ ಉಂಟು ಮಾಡಿದೆ.

ADVERTISEMENT

ಹೋಬಳಿವಾರು:ಮಡಿಕೇರಿ ಕಸಬಾ 18.80, ನಾಪೋಕ್ಲು 14, ಭಾಗಮಂಡಲ 21.04, ವಿರಾಜಪೇಟೆ ಕಸಬಾ 9.80, ಹುದಿಕೇರಿ 20, ಶ್ರೀಮಂಗಲ 6, ಪೊನ್ನಂಪೇಟೆ 20, ಅಮ್ಮತ್ತಿ 1, ಬಾಳೆಲೆ 4, ಮಡಿಕೇರಿ ಕಸಬಾ 3.80, ಶನಿವಾರಸಂತೆ 1, ಶಾಂತಳ್ಳಿ 39.80, ಕೊಡ್ಲಿಪೇಟೆ 6, ಕುಶಾಲನಗರ 20.03, ಸುಂಟಿಕೊಪ್ಪ 1 ಮಿ.ಮೀ ಮಳೆಯಾಗಿದೆ.

ಕಾವೇರಿ ಜಾತ್ರೆಗೂ ಮಳೆ ಅಡ್ಡಿ

ಅ.17ರಂದು ಬೆಳಿಗ್ಗೆ ತಲಕಾವೇರಿಯಲ್ಲಿ ತೀರ್ಥೋದ್ಭವ ನಡೆಯಲಿದೆ. ಅ.15ರಂದು ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಕೆಲವು ಧಾರ್ಮಿಕ ಕಾರ್ಯಗಳು ನಡೆಯಲಿದ್ದು, ಅದಕ್ಕೆ ಮಳೆರಾಯ ಅಡ್ಡಿಪಡಿಸುವ ಆತಂಕ ಎದುರಾಗಿದೆ. ಇನ್ನು ತೀರ್ಥೋದ್ಭವ ಬೆಳಗ್ಗಿನಜಾವ ಬಂದಿದ್ದು ಮಳೆ ಬಂದರೆ ಕಾವೇರಿ ದರ್ಶನಕ್ಕೆ ಅಡ್ಡಿಯಾಗಲಿದೆ.

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 11.84 ಮಿ.ಮೀ ಮಳೆಯಾಗಿದೆ.

ಕಳೆದ ವರ್ಷ ಇದೇ ದಿನ 10.38 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 3,737.53 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 2,589.32 ಮಿ.ಮೀ ಮಳೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.