ಮಂಡ್ಯ: ‘ರೈತ ಸಂಘದ ಮೂಲ ಉದ್ದೇಶ ಹಾಗೂ ಬುನಾದಿಯನ್ನು ಗಟ್ಟಿಗೊಳಿಸಲು ಶೇ 25ರಷ್ಟು ಪ್ರಗತಿಪರ ಚಿಂತಕರನ್ನು ಸಂಘಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಶುಕ್ರವಾರ ಹೇಳಿದರು.
‘ರೈತ ಸಂಘದಲ್ಲಿ ಸಿದ್ಧಾಂತಗಳು ಒಂದೇ ಆಗಿದ್ದರೂ ವಿಚಾರಗಳು ವಿಭಿನ್ನವಾಗಿವೆ. ಸ್ವಾರ್ಥಕ್ಕೆ ಬೆಲೆ ಕೊಡುವವರು ಇನ್ನೂ 10 ಸಂಘ
ಕಟ್ಟಲಿ. ಹಲವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಕಷ್ಟು ಸಮಸ್ಯೆ ಅನುಭವಿಸಿದ್ದೇವೆ. ಈಗ ಮತ್ತದೇ ತಪ್ಪು ಮಾಡುವುದಿಲ್ಲ. ಸಂಘಟನೆ ಗಟ್ಟಿಗೊಳ್ಳಬೇಕು, ಹೀಗಾಗಿ ಹೊಸ ರೈತರು ಹಾಗೂ ಪ್ರಗತಿಪರ ಚಿಂತಕರನ್ನು ಸೇರಿಸಿಕೊಳ್ಳಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಪಾಂಡವಪುರ ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಫೆ. 18ರಂದು ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಕಂಚಿನ ಪುತ್ಥಳಿ ಅನಾವರಣಗೊಳಿಸಲಾಗುವುದು. ಇದೇ ಸಂದರ್ಭದಲ್ಲಿ ರೈತರ ರಾಜ್ಯಮಟ್ಟದ ಸಮಾವೇಶ ನಡೆಯಲಿದೆ. ಸ್ಪೀಕರ್ ಕೆ.ಆರ್.ರಮೇಶ್ಕುಮಾರ್ ಪುತ್ಥಳಿ ಅನಾವರಣ ಮಾಡಲಿದ್ದಾರೆ. ಪ್ರೊ.ಅಲ್ಲಮಪ್ರಭು ಬೆಟ್ಟದೂರು ಅವರ ಸಂಪಾದನೆಯ ‘ರೈತ ಆತ್ಮಹತ್ಯೆ’ ಪುಸ್ತಕವನ್ನು ಸಾಹಿತಿ ದೇವನೂರ ಮಹಾದೇವ ಬಿಡುಗಡೆ ಮಾಡಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.