ಬೆಂಗಳೂರು: ಬಿಜೆಪಿ ಪ್ರತಿನಿಧಿಸುತ್ತಿದ್ದ ಅಶೋಕ್ ಗಸ್ತಿ ಅವರು ನಿಧನರಾಗಿದ್ದರಿಂದಾಗಿ ತೆರವಾದ ರಾಜ್ಯಸಭೆಯ ಒಂದು ಸ್ಥಾನದ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಲು ಬಿಜೆಪಿಯಲ್ಲಿ ಬಿರುಸಿನ ಪೈಪೋಟಿ ಆರಂಭವಾಗಿದೆ.
ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಇರುವ ಕಾರಣಕ್ಕೆ ಬಿಜೆಪಿಗೆ ಈ ಸ್ಥಾನ ದಕ್ಕುವುದು ಸಾಧ್ಯತೆ ಹೆಚ್ಚಿದೆ. ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದರೂ ಗೆಲ್ಲುವ ಅವಕಾಶವೇ ಇಲ್ಲ. ಹೀಗಾಗಿ, ಅವಿರೋಧ ಆಯ್ಕೆ ಮಾದರಿಯಲ್ಲಿ ಈ ಚುನಾವಣೆ ನಡೆಯಲಿದೆ. ಈ ಕಾರಣಕ್ಕಾಗಿ, ಬಿಜೆಪಿಯಲ್ಲಿ ಪೈಪೋಟಿ ಹೆಚ್ಚಿದೆ.
ಗಸ್ತಿ ರಾಜ್ಯಸಭೆಗೆ ಆಯ್ಕೆಯಾದರೂ ಅವರಿಗೆ ಸದನ ಪ್ರವೇಶದ ಅವಕಾಶ ಸಿಗಲಿಲ್ಲ. ಅಷ್ಟರಲ್ಲೇ ಕೋವಿಡ್ನಿಂದಾಗಿ ಮೃತಪಟ್ಟರು. ಈ ಕಾರಣಕ್ಕೆ ಅವರ ಪತ್ನಿಗೆ ಅವಕಾಶ ನೀಡಬೇಕು ಎಂಬ ಕೂಗು ಪಕ್ಷದ ಒಂದು ವಲಯದಿಂದ ಎದ್ದಿದೆ. ಗಸ್ತಿಯವರ ಪತ್ನಿಯೂ ಅವಕಾಶ ನೀಡುವಂತೆ ಕೋರಿದ್ದಾರೆ. ಈ ಮಧ್ಯೆ ಬಿ.ಎಲ್.ಸಂತೋಷ್ ಅವರಿಗೆ ಆಪ್ತರಾದ, ಸಂಘ ಪರಿವಾರದ ಜತೆಗೆ ನಿಕಟವಾಗಿರುವ ಪಕ್ಷದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಶಂಕರಪ್ಪ ಹಾಗೂ ಡಿ.ಎಸ್.ವೀರಯ್ಯ ಅವರ ಹೆಸರುಗಳೂ ಮುನ್ನೆಲೆಗೆ ಬಂದಿವೆ. ವೀರಯ್ಯ ಪರವಾಗಿ ಕೆಲ ದಲಿತ ಸಂಘಟನೆಗಳು ಪಕ್ಷದ ಮೇಲೆ ಒತ್ತಡ ಹೇರಲಾರಂಭಿಸಿವೆ.ಇದಲ್ಲದೇ ಇನ್ನೂ ಕೆಲವರು ತೆರೆಯ ಮರೆಯಲ್ಲೇ ಪ್ರಯತ್ನ ನಡೆಸಿದ್ದಾರೆ.
ಗಸ್ತಿ ಅವರು ರಾಯಚೂರು ಭಾಗದವರಾಗಿದ್ದರಿಂದ ಆ ಭಾಗದವರಿಗೇ ಟಿಕೆಟ್ ನೀಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಆಕಾಂಕ್ಷಿಗಳ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸಿ ಆಯ್ಕೆ ತೀರ್ಮಾನವನ್ನು ಅವರಿಗೇ ಬಿಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.