ಕೂಡಲಸಂಗಮ: ‘ರಾಮ ಬದುಕಿದ್ದು ಬ್ರಾಹ್ಮಣರಿಗಾಗಿ, ಪ್ರಜಾಪ್ರಭುತ್ವಕ್ಕೆ ಅಲ್ಲ, ಬಸವಣ್ಣ ಬದುಕಿದ್ದು ಸಮಸ್ತ
ಪ್ರಜಾಪ್ರಭುತ್ವಕ್ಕೆ. ಲಿಂಗಾಯತರಿಗೆ ರಾಮ ಮಂದಿರದ ಅಗತ್ಯ ಇಲ್ಲ, ಅನುಭವ ಮಂಟಪದ ಅಗತ್ಯ ಇದೆ’ ಎಂದು ಮೈಸೂರಿನ ಬಸವ ಕೇಂದ್ರದ ಬಸವಯೋಗಿ ಪ್ರಭು ಸ್ವಾಮೀಜಿ ಹೇಳಿದರು.
ಕೂಡಲಸಂಗಮದಲ್ಲಿ ನಡೆದ 34ನೇ ಶರಣ ಮೇಳದ ಮೊದಲ ದಿನವಾದ ಮಂಗಳವಾರ ರಾತ್ರಿ ನಡೆದ ಲಿಂಗಾಯತ ಧರ್ಮ ಮಾನ್ಯತೆಗಾಗಿ ರೂಪುರೇಷೆ ವಿಷಯದ ಧರ್ಮಚಿಂತನ ಗೋಷ್ಠಿ ಸಮಾರಂಭದಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ನಮ್ಮದು ಶರಣ, ಬಸವ ಸಂಸ್ಕೃತಿ ಎಂಬುದನ್ನು ಪ್ರತಿಯೊಬ್ಬ ಲಿಂಗಾಯತರು ಅರಿಯಬೇಕು’ ಎಂದರು.
ಸಮಾರಂಭ ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಆರ್.ಪಾಟೀಲ ಮಾತನಾಡಿ, ‘ಕೃಷ್ಣ ಪೌರಾಣಿಕ ವ್ಯಕ್ತಿ, ಶಿವ ಚಾರಿತ್ರಿಕ ವ್ಯಕ್ತಿ. ಶಿವ ಸಂಸ್ಕೃತಿಯ ಆರಾಧಕರಾದ ಲಿಂಗಾಯತರಿಗೆ ರಾಮಮಂದಿರದ ಅಗತ್ಯ ಏಕೆ? ರಾಮ ಮಂದಿರ ಕಟ್ಟುತ್ತೇವೆ ಎಂದು ಧರ್ಮದ ಹೆಸರಿನಲ್ಲಿ ದೇಶೀಯ ಸಂಸ್ಕೃತಿ, ಪರಂಪರೆ ಒಡೆಯುವ ಕಾರ್ಯಕ್ಕೆ ಮೂಲಭೂತವಾದಿಗಳು ಕೈಹಾಕಿದ್ದಾರೆ. ಶಿವ ಪರಂಪರೆಯ ಆರಾಧಕರಾದ ಲಿಂಗಾಯತರು ರಾಮಮಂದಿರ ನಿರ್ಮಾಣಕ್ಕೆ ಚಂದಾ ಕೊಡಬಾರದು. ಶಿವಸಂಸ್ಕೃತಿಯ ಉಳಿವಿಗಾಗಿ ಶಿವನಮೂರ್ತಿ ನಿರ್ಮಿಸುವ ಕಾರ್ಯ ಮಾಡಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.