ADVERTISEMENT

ಸಿ.ಡಿ. ಪ್ರಕರಣ: ಗ್ರಾನೈಟ್ ಉದ್ಯಮಿ ಮನೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:46 IST
Last Updated 20 ಮಾರ್ಚ್ 2021, 19:46 IST
ಸಿ.ಡಿ. ಪ್ರಕರಣ
ಸಿ.ಡಿ. ಪ್ರಕರಣ   

ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ ಆರೋಪದಡಿ ಜೆ.ಪಿ.ನಗರದಲ್ಲಿ ವಾಸವಿದ್ದ ಗ್ರಾನೈಟ್‌ ಉದ್ಯಮಿಶಿವಕುಮಾರ್ ಮನೆ ಮೇಲೆವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶನಿವಾರ ದಾಳಿ ನಡೆಸಿದರು.

ಪ್ರಕರಣದ ಆರೋಪಿಗಳ ಜೊತೆಗೆ ಶಿವಕುಮಾರ್ ಸಂಪರ್ಕದಲ್ಲಿದ್ದರು ಹಾಗೂ ಸಿ.ಡಿ ಬಿಡುಗಡೆ ವಿಚಾರವಾಗಿ ಆರೋಪಿಗಳಿಗೆ ನೆರವು ನೀಡಿದ್ದಾಗಿ ಎಸ್‌ಐಟಿಗೆ ಮಾಹಿತಿ ಸಿಕ್ಕಿತ್ತು.

‘ನ್ಯಾಯಾಲಯದಿಂದ ವಾರಂಟ್ ಪಡೆದು, ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಮನೆಯಲ್ಲಿ ಸಿಕ್ಕ ಕೆಲವು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಬಳಿಕಶಿವಕುಮಾರ್ ಅವರನ್ನು ಆಡುಗೋಡಿಯಲ್ಲಿರುವ ತಾಂತ್ರಿಕ ಘಟಕದಲ್ಲಿ ವಿಚಾರಣೆ ನಡೆಸಲಾಗಿದೆ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ADVERTISEMENT

‘ಕನಕಪುರದವರಾದ ಶಿವ ಕುಮಾರ್, ಹಲವಾರು ವರ್ಷಗಳಿಂದ ಗ್ರಾನೈಟ್ ಉದ್ಯಮ ನಡೆಸುತ್ತಿದ್ದಾರೆ. ಸಿ.ಡಿ ಬಿಡುಗಡೆಗೂ ಮುನ್ನ ಇವರು ಆರೋಪಿಗಳ ಜೊತೆ ಸಂಭಾಷಣೆ ನಡೆಸಿರುವ ಮಾಹಿತಿತನಿಖೆ ವೇಳೆಎಸ್‌ಐಟಿ ಅಧಿಕಾರಿಗಳಿಗೆ ಸಿಕ್ಕಿತ್ತು. ಪ್ರಕರಣದ ನಂತರ ಶಿವಕುಮಾರ್ ನಾಪತ್ತೆಯಾಗಿದ್ದರು.ಕೇರಳದಲ್ಲಿ ಕೊನೆಯದಾಗಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು’ ಎಂದೂ ಮೂಲಗಳು ಹೇಳಿವೆ.

‘ನಾಯಕ’ರ ಜತೆ ನಂಟು!

‘ರಾಷ್ಟ್ರೀಯ ಪಕ್ಷವೊಂದರ ನಾಯಕರೊಬ್ಬರ ಜತೆಗೆ ಗ್ರಾನೈಟ್ ಉದ್ಯಮಿ ಶಿವಕುಮಾರ್‌ ಹಲವು ವರ್ಷಗಳಿಂದ ಒಡನಾಟ ಇಟ್ಟುಕೊಂಡಿರುವ ಮಾಹಿತಿ ಸಿಕ್ಕಿದೆ. ಈ ಬಗ್ಗೆ ವಿಚಾರಣೆ ವೇಳೆ ಮಾಹಿತಿ ಕಲೆ ಹಾಕಲಾಗುವುದು. ಅವರಿಂದ ಹೇಳಿಕೆ ಪಡೆದು, ತನಿಖೆ ಮುಂದುವರಿಸಲಾಗುವುದು. ಒಂದು ವೇಳೆ ಪ್ರಕರಣದಲ್ಲಿ ನಾಯಕರ ಪಾತ್ರವಿದ್ದಲ್ಲಿ, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಅಪಹರಣ ಪ್ರಕರಣ ಎಸ್‌ಐಟಿಗೆ

‘ಸಿ.ಡಿ ಪ್ರಕರಣದಲ್ಲಿ ಯುವತಿಯ ತಂದೆ ನೀಡಿರುವ ಅಪಹರಣ ಪ್ರಕರಣವನ್ನು ಎಸ್‌ಐಟಿಗೆ ವರ್ಗಾ ವಣೆ ಮಾಡಲಾಗಿದ್ದು, ಎಲ್ಲವೂ ತನಿಖಾ ಹಂತದಲ್ಲಿದೆ. ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.