ADVERTISEMENT

ಸಿ.ಡಿ. ಪ್ರಕರಣ: ಎಸ್ಐಟಿ ಎದುರು ಹಾಜರಾದ ನರೇಶ್, ಶ್ರವಣ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 8:16 IST
Last Updated 12 ಜೂನ್ 2021, 8:16 IST
   

ಬೆಂಗಳೂರು: ಸಿ.ಡಿ ಮುಂದಿಟ್ಟುಕೊಂಡು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದ ಪ್ರಕರಣದ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್, ವಿಶೇಷ ತನಿಖಾ‌ ತಂಡದ (ಎಸ್ಐಟಿ) ಎದುರು ಹಾಜರಾಗಿದ್ದಾರೆ.

ರಾಜ್ಯಮಟ್ಟದ ಸುದ್ದಿವಾಹಿನಿಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದ ಇಬ್ಬರೂ ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ಎಸ್ಐಟಿಗೆ ಮಾಹಿತಿ ಸಿಕ್ಕಿತ್ತು. ಆದರೆ, ಅವರಿಬ್ಬರು ತಲೆಮರೆಸಿಕೊಂಡಿದ್ದರು.

ಹೊರ ಜಿಲ್ಲೆ‌ ಹಾಗೂ ಹೊರ ರಾಜ್ಯಗಳಲ್ಲಿ ಆರೋಪಿಗಳಿಗಾಗಿ ಎಸ್ಐಟಿ‌ ಹುಡುಕಾಟ ನಡೆಸುತ್ತಿತ್ತು. ಇದರ‌ ನಡುವೆಯೇ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಆರೋಪಿಗಳು, ನಿರೀಕ್ಷಣಾ ಜಾಮೀನು ಕೋರಿದ್ದರು.

ADVERTISEMENT

ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಾಲಯ ಷರತ್ತು ವಿಧಿಸಿತ್ತು. ಅದೇ ಕಾರಣಕ್ಕೆ ಶನಿವಾರ ಬೆಳಿಗ್ಗೆ ಆರೋಪಿಗಳು, ಆಡುಗೋಡಿಯಲ್ಲಿರುವ ಎಸ್ಐಟಿ‌ಕಚೇರಿಗೆ ಹಾಜರಾಗಿದ್ದಾರೆ.

ಸದಾಶಿವನಗರ ಠಾಣೆಯಲ್ಲಿ ರಮೇಶ ಜಾರಕಿಹೊಳಿ‌ ನೀಡಿದ್ದ ದೂರಿನನ್ವಯ ಎಫ್ಐಆರ್ ‌ದಾಖಲಾಗಿತ್ತು. ಅದರ ತನಿಖೆಯನ್ನು ಎಸ್ಐಟಿ ನಡೆಸುತ್ತಿದೆ.

ಅದರ ತನಿಖಾಧಿಕಾರಿ ಹಾಗೂ ಸಿಬ್ಬಂದಿ, ಆರೋಪಿಗಳನ್ನು‌ ವಿಚಾರಣೆ ನಡೆಸುತ್ತಿದ್ದಾರೆ. ಸಂಜೆಯವರೆಗೂ ವಿಚಾರಣೆ ನಡೆಯುವ‌ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.