ಬೆಂಗಳೂರು: ‘ಹೊಟ್ಟೆಪಾಡಿಗಾಗಿ ಬಟ್ಟೆಬಿಚ್ಚಿ ತಿರುಗಾಡುವವರಿಗೆ ಗಾಂಧಿ ಮೌಲ್ಯಗಳ ಬಗ್ಗೆ ಏನು ಗೊತ್ತಿದೆ’ ಎಂದು ಶಾಸಕ ರಮೇಶ್ ಕುಮಾರ್ ಕಿಡಿಕಾರಿದರು.
ಸ್ವಾತಂತ್ರ್ಯ ಭಾರತದ 75 ವರ್ಷಗಳ ಸಂಭ್ರಮಾಚರಣೆ ಪ್ರಯುಕ್ತ ನಗರದಲ್ಲಿ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಗಳು ಗುರುವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಮಹಾತ್ಮ ಗಾಂಧೀಜಿ ಬಗ್ಗೆ ಹಗುರವಾಗಿ ಮಾತನಾಡುವವರು ಮನುಷ್ಯರಾ ಅಥವಾ ನರ ರಾಕ್ಷಸರಾ? ನಿಮಗೆ ನೀವೇ ಪ್ರಶ್ನೆ ಹಾಕಿಕೊಳ್ಳಿ. ಅವರ ನಡತೆಯಿಂದ ಮಹಾತ್ಮ ಎನ್ನುವ ಬಿರುದು ಬಂದಿದೆ. ಇದು ಸಮಾಜ ನೀಡಿದ ಗೌರವ’ ಎಂದು ಹೇಳಿದರು.
‘ಗಾಂಧಿ ಅವರು ರಾಮಭಕ್ತ. ಗಾಂಧೀಜಿಗಿಂತ ದೊಡ್ಡ ರಾಮಭಕ್ತ ಈ ದೇಶದಲ್ಲಿ ಯಾರಿದ್ದಾರೆ? ಆದರೆ, ಗಾಂಧಿ ಅವರನ್ನು ಈಗ ರಾಮನಿಂದ ದೂರ ಮಾಡಲಾಗಿದೆ. ನಾಥೂರಾಮ್ ಗೋಡ್ಸೆಯನ್ನು ಆರಾಧಿಸುವ ವಾತಾವರಣ ಸೃಷ್ಟಿಸಲಾಗಿದೆ. ಇತಿಹಾಸವನ್ನು ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ಯಪಡಿಸಿದರು.
ಆರ್ಎಸ್ಎಸ್ ಮತ್ತು ಹಿಂದೂ ಮಹಾಸಭಾ ಧೋರಣೆಗಳನ್ನು ಟೀಕಿಸಿದ ಅವರು, ‘ಭಾರತ ಬಿಟ್ಟು ತೊಲಗಿ ಚಳವಳಿ ನಡೆಯುವಾಗ ನೀವು ಎಲ್ಲಿಗೆ ಹೋಗಿದ್ದೀರಿ? ಆಗ ಹಿಂದೂ ಮಹಾಸಭಾ ಇರಲಿಲ್ವಾ? ಆರ್ಎಸ್ಎಸ್ ಇರಲಿಲ್ವಾ? ಕಸ್ತೂರ್ ಬಾ ಮೃತಪಟ್ಟಾಗ ನಿಮಗೆ ದುಃಖ ಆಗಲಿಲ್ವಾ? ಈಗ ಎಂಥ ದೇಶಭಕ್ತಿ, ಮಹಾನ್ ದೇಶಭಕ್ತಿ ನಿಮ್ಮದು. ಭಾರತ್ ಮಾತಾಕೀ ಜೈ ಎಂದು ಈಗ ಹೇಳುತ್ತೀರಿ. ಯಾವ ಭಾರತ ಮಾತೆ, ಅಂಬಾನಿ ಮಾತೆಯಾ? ಅದಾನಿ ಮಾತೆಯಾ ಅಥವಾ ಭಗತ್ ಸಿಂಗ್ ಭಾರತ್ ಮಾತೆಯಾ’ ಎಂದು ಪ್ರಶ್ನಿಸಿದರು.
‘ಈಗ ನರಿಗಳು ಬಂದು ಕುರ್ಚಿಯಲ್ಲಿ ಕುಳಿತಿವೆ. ನಾವು ಸಿಂಹದ ಮರಿಗಳು, ನರಿಗಳಿಗೆ ಅಂಜುವುದು ಬೇಡ. ಧೈರ್ಯದಿಂದ ಮುನ್ನುಗ್ಗೋಣ’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬೆಳಗಾವಿ ಜಿಲ್ಲೆಯ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.