ADVERTISEMENT

ಜನರ ಬಗ್ಗೆ ಪ್ರೀತಿ ಇದ್ದರೆ ಬನ್ನಿ: ವಿರೋಧ ಪಕ್ಷಗಳಿಗೆ ಸಚಿವ ಬಿ.ಶ್ರೀರಾಮುಲು ಕರೆ

​ಪ್ರಜಾವಾಣಿ ವಾರ್ತೆ
Published 5 ಮೇ 2021, 12:29 IST
Last Updated 5 ಮೇ 2021, 12:29 IST
ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ 
ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ    

ಚಿತ್ರದುರ್ಗ: ಕೋವಿಡ್‌ ನಿಯಂತ್ರಣಕ್ಕೆ ವಿಶ್ವವೇ ಒಂದಾಗಿದೆ. ಸ್ವಾರ್ಥ, ಲಾಬಿಗಾಗಿ ಆರೋ‍ಪ ಮಾಡುವುದನ್ನು ಬಿಟ್ಟು ಬನ್ನಿ. ಜನರ ಬಗ್ಗೆ ಕಳಕಳಿ, ಪ್ರೀತಿ ಇದ್ದರೆ ಸರ್ಕಾರದೊಂದಿಗೆ ಕೈಜೋಡಿಸಿ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವಿರೋಧ ಪಕ್ಷಗಳಿಗೆ ಆಹ್ವಾನ ನೀಡಿದರು.

‘ಸರ್ಕಾರ ಐಸಿಯುನಲ್ಲಿದೆ’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಬುಧವಾರ ಇಲ್ಲಿ ಪ್ರತಿಕ್ರಿಯೆ ನೀಡಿದರು. ‘ಕೊರೊನಾ ಸೋಂಕಿಗೆ ವಿಶ್ವ ತಲ್ಲಣಗೊಂಡಿದೆ. ದೇಶದಲ್ಲಿ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೈಮೀರಿ ಪ್ರಯತ್ನಿಸುತ್ತಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಒಗ್ಗೂಡಿ ಕೆಲಸ ಮಾಡಿದರೆ ಮಾತ್ರ ಜನರ ಪ್ರಾಣ ಉಳಿಸಲು ಸಾಧ್ಯವಿದೆ’ ಎಂದರು.

‘ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿರೋಧ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಸಲಹೆಗಳನ್ನು ಆಹ್ವಾನಿಸಿ ಚರ್ಚಿಸಲಾಗಿದೆ. ಸರ್ಕಾರದ ಕಾರ್ಯವನ್ನು ಸಭೆಯಲ್ಲಿ ಶ್ಲಾಘಿಸಿದ ಡಿ.ಕೆ.ಶಿವಕುಮಾರ್‌, ಹೊರಗೆ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಆರೋಪ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ADVERTISEMENT

‘ಚಾಮರಾಜನಗರ ಜಿಲ್ಲೆಯಲ್ಲಿ 24 ಜನರು ಮೃತಪಟ್ಟ ಘಟನೆಯನ್ನು ರಾಜಕೀಕರಣಗೊಳಿಸುವುದು ತಪ್ಪು. ಈ ದುರಂತಕ್ಕೆ ಎಲ್ಲರೂ ಪ್ರಾಯಶ್ಚಿತ ಮಾಡಿಕೊಳ್ಳಬೇಕಿದೆ. ಇನ್ನು ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಳ್ಳೋಣ. ಸರ್ಕಾರದ ಮೇಲೆ ದೂರುಗಳನ್ನು ಹೇಳಿ ಜವಾಬ್ದಾರಿಯಿಂದ ನುಣಿಚಿಕೊಳ್ಳಬೇಡಿ. ವಿರೋಧ ಪಕ್ಷವಾಗಿ ನೀವೇನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದರು.

***

ನಾನು ರಾಜ್ಯ ಸುತ್ತಿ ಪರಿಶೀಲನೆ ನಡೆಸಿದ್ದೇನೆ. ಎಲ್ಲಿಯೂ ಬೆಡ್‌ ಬ್ಲಾಕಿಂಗ್ ಮಾಡಿರುವುದು ಕಂಡುಬಂದಿಲ್ಲ. ಆದರೆ, ಜನರ ಸಾವಿನಲ್ಲೂ ಲಾಭದ ನಿರೀಕ್ಷೆ ಹೊಂದಿದವರು ಇದ್ದಾರೆ.

–ಬಿ.ಶ್ರೀರಾಮುಲು, ಸಮಾಜ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.