ADVERTISEMENT

ಬಿಜೆಪಿಗೆ ರಮ್ಯಾ ಅಭಿಮಾನಿಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 17:19 IST
Last Updated 21 ಅಕ್ಟೋಬರ್ 2018, 17:19 IST

ಮಂಡ್ಯ: ‘ಲೋಕಸಭೆ ಉಪ ಚುನಾವಣೆಯಲ್ಲಿ ಎಲ್‌.ಆರ್‌.ಶಿವರಾಮೇಗೌಡ ಜೆಡಿಎಸ್‌–ಕಾಂಗ್ರೆಸ್‌ ಒಮ್ಮತದ ಅಭ್ಯರ್ಥಿಯಾಗಿದ್ದರೂ ಅವರಿಗೆ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರ ಬೆಂಬಲ ಇಲ್ಲ. ಅವರನ್ನು ಸೋಲಿಸಲು ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ’ ಎಂದು ರಮ್ಯಾ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದಾರೆ.

2013ರ ಲೋಕಸಭಾ ಚುನಾವಣೆಯಲ್ಲಿ ಶಿವರಾಮೇಗೌಡರು ಕಾಂಗ್ರೆಸ್‌ನಲ್ಲೇ ಇದ್ದರು. ಜೆಡಿಎಸ್‌ ಸೇರಿದ ನಂತರ ರಮ್ಯಾ ಸೋಲಿಗೆ ತಾನೇ ಕಾರಣ ಎಂದು ಬಹಿರಂಗ ಸಭೆಯಲ್ಲಿ ಹೇಳಿದ್ದರು. ಅಲ್ಲದೆ, ರಮ್ಯಾ ಅವರನ್ನು ಫ್ಲಾಯಿಂಗ್‌ ಸ್ಟಾರ್‌ ಎಂದು ಕರೆದಿದ್ದರು. ಈಗ ಉಪ ಚುನಾವಣೆಯಲ್ಲಿ ಅವರ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ರಮ್ಯಾ ಅವರು ಗೆದ್ದಿದ್ದರೆ ಈ ಉಪ ಚುನಾವಣೆ ಬರುತ್ತಲೇ ಇರಲಿಲ್ಲ. ರಮ್ಯಾ ವಿರುದ್ಧವಾಗಿ ಕೆಲಸ ಮಾಡಿರುವ ಶಿವರಾಮೇಗೌಡರಿಗೆ ನಮ್ಮ ಬೆಂಬಲ ಇಲ್ಲ, ಅವರ ವಿರುದ್ಧವಾಗಿ ಕೆಲಸ ಮಾಡುತ್ತೇವೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ.

‘ಶಿವರಾಮೇಗೌಡರು ಕಾಂಗ್ರೆಸ್‌ನಲ್ಲಿ ಇದ್ದುಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ರಮ್ಯಾ ಮೇಡಂಗೆ ಅನ್ಯಾಯ ಮಾಡಿದ್ದಾರೆ. ಅವರು ಮಂಡ್ಯಕ್ಕೆ ಬಾರದಂತೆ ಮಾಡಿದ್ದಾರೆ. ಅವರ ವಿರುದ್ಧ ಮತ ಚಲಾಯಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ನಮಗೆ ಈಗ ಇರುವ ಆಯ್ಕೆ ಬಿಜೆಪಿ ಮಾತ್ರ’ ಎಂದು ರಮ್ಯಾ ಅಭಿಮಾನಿ, ಕಾಂಗ್ರೆಸ್‌ ಕಾರ್ಯಕರ್ತ ಗುಣಶೇಖರ್‌ ತಿಳಿಸಿದರು.

ADVERTISEMENT

ಜೆಡಿಎಸ್‌–ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಾಳೆ: ಎಲ್‌.ಆರ್‌.ಶಿವರಾಮೇಗೌಡರ ವಿರುದ್ಧ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಅಸಮಾಧಾನ ಇರುವ ಕಾರಣ ಅವರನ್ನು ಸಮಾಧಾನಪಡಿಸಲು ಅ.23ರಂದು ನಗರದ ಕನಕ ಭವನದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರ ಸಭೆ ನಡೆಯಲಿದೆ. ಸಭೆಯಲ್ಲಿ ಎರಡೂ ಪಕ್ಷಗಳ ರಾಜ್ಯಮಟ್ಟದ ಮುಖಂಡರು ಭಾಗವಹಿಸಲಿದ್ದು, ಸ್ಥಳೀಯ ಮುಖಂಡರ ಮನವೊಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.