ಬೆಂಗಳೂರು: ‘ಉತ್ಕೃಷ್ಟ ಯೋಜನೆ’ ಅಡಿಯಲ್ಲಿ ಹೈಟೆಕ್ ರೂಪ ಪಡೆದಿರುವ ‘ರಾಣಿ ಚೆನ್ನಮ್ಮ ಎಕ್ಸ್ಪ್ರೆಸ್’ಗೆ ಶನಿವಾರ ಲೋಕಾರ್ಪಣೆಗೊಂಡಿತು.
ಈ ಯೋಜನೆಯಡಿ ಮೊದಲ ಹಂತದಲ್ಲಿ 10 ಮತ್ತು ಎರಡನೇ ಹಂತದಲ್ಲಿ 26 ರೈಲುಗಳನ್ನು ನವೀಕರಿಸುವ ಯೋಜನೆಯನ್ನು ನೈರುತ್ಯ ರೈಲ್ವೆ ಹಾಕಿಕೊಂಡಿದೆ. ವಾರಾಣಸಿ–ಹುಬ್ಬಳ್ಳಿ–ವಾರಾಣಸಿ ಎಕ್ಸ್ಪ್ರೆಸ್ ನವೀಕೃತ ರೈಲು ಮೇ 24ರಂದು ಉದ್ಘಾಟನೆಗೊಂಡಿತ್ತು.
ಬೆಂಗಳೂರು–ಕೊಲ್ಲಾಪುರ–ಬೆಂಗಳೂರು (ರಾಣಿ ಚೆನ್ನಮ್ಮ) ಎಕ್ಸ್ಪ್ರೆಸ್ಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿಶನಿವಾರ ಚಾಲನೆ ನೀಡಲಾಯಿತು.
‘ಹುಬ್ಬಳ್ಳಿ ಮತ್ತು ಮೈಸೂರು ಕಾರ್ಯಾಗಾರಗಳಲ್ಲಿ ಈ ರೈಲುಗಳು ನವೀಕೃತಗೊಂಡಿವೆ. ಪ್ರತಿ ರೈಲು ನವೀಕರಣಕ್ಕೆ ₹60 ಲಕ್ಷ ವೆಚ್ಚವಾಗಿದೆ. ಎಲ್ಲಾ ಬೋಗಿಗಳಿಗೆ ಏಪ್ರಿಕಾಟ್ ಹಳದಿ ಮತ್ತು ರಕ್ತ ಕೆಂಪು ಬಣ್ಣ ಬಳಿಯಲಾಗಿದೆ. ಎಲ್ಇಡಿ ದೀಪಗಳು, ಶೌಚಾಲಯಗಳಿಗೆ ಪರಿಸರ ಸ್ನೇಹಿ ನೆಲಹಾಸು ಹೊದಿಸಲಾಗಿದೆ’ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಹವಾನಿಯಂತ್ರಿತ ಬೋಗಿಗಳಿಗೆ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳನ್ನು ಅಂಟಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಬೋಗಿಗಳಿಗೂ ಅಗ್ನಿ ಶಾಮಕಗಳನ್ನು ಅಳವಡಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ವಿವರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.