ADVERTISEMENT

ರಾಘವೇಶ್ವರ ಶ್ರೀ ಅತ್ಯಾಚಾರ ಪ್ರಕರಣ: ಮಾಧ್ಯಮ ಪ್ರಕಟಣೆ ಮೂಲಕ ಆರೋಪಿಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 17:31 IST
Last Updated 24 ಆಗಸ್ಟ್ 2018, 17:31 IST
ರಾಘವೇಶ್ವರ ಭಾರತೀ ಸ್ವಾಮೀಜಿ
ರಾಘವೇಶ್ವರ ಭಾರತೀ ಸ್ವಾಮೀಜಿ   

ಬೆಂಗಳೂರು: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧದ ಎರಡನೇ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳಿಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡುವ ಮೂಲಕ ನೋಟಿಸ್ ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

‘ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಕೋರಿ ಸಂತ್ರಸ್ತೆ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ನವೀನ್‌ ಸಿನ್ಹಾ ಶುಕ್ರವಾರ ವಿಚಾರಣೆ ನಡೆಸಿದರು.

ಸಂತ್ರಸ್ತೆಯ ಪರ ಹಾಜರಿದ್ದ ವಕೀಲ ರಾಜೇಶ್‌ ಮಹಾಲೆ, ‘ಪ್ರಕರಣದ ಪ್ರತಿವಾದಿಗಳಾದ ಗಿರಿನಗರ ಠಾಣಾಧಿಕಾರಿ, ಅನಂತಣ್ಣ ಅಲಿಯಾಸ್‌ ಅನಂತ ಭಟ್‌, ಬಿ.ಆರ್.ಸುಬ್ರಹ್ಮಣ್ಯ ಅಲಿಯಾಸ್ ಸುಧಾಕರ, ಮಧುಕರ ಅಲಿಯಾಸ್‌ ಮಧುಕರ ಶಿವಯ್ಯ ಹೆಬ್ಬಾರ್‌ ಮತ್ತು ಜಗದೀಶ ಶರ್ಮ ಅಲಿಯಾಸ್‌ ಸಿ.ಜಗದೀಶ ಅವರಿಗೆ ನೋಟಿಸ್‌ ಜಾರಿಯಾಗಿಲ್ಲ’ ಎಂಬ ಅಂಶವನ್ನು ಗಮನಕ್ಕೆ ತಂದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ ನೋಟಿಸ್ ಜಾರಿಗೊಳಿಸಲು ತಾಕೀತು ಮಾಡಿದೆ.

ADVERTISEMENT

ಇದು ಯಾವ ಪ್ರಕರಣ?: ರಾಮಚಂದ್ರಾಪುರ ಮಠದ ವಸತಿ ಶಾಲೆಯಲ್ಲಿ ಓದಿರುವ ತರುಣಿಯೊಬ್ಬರು, ‘ನಾನು ಹತ್ತನೇ ತರಗತಿಯಲ್ಲಿದ್ದಾಗ ಸ್ವಾಮೀಜಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಮತ್ತು 2012ರಲ್ಲಿ ಅಪಹರಣ ಮಾಡಿ ಪುನಃ ಅತ್ಯಾಚಾರ ಎಸಗಿದ್ದರು’ ಎಂದು ಆರೋಪಿಸಿ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಈ ಕುರಿತಂತೆ 2015ರ ಆಗಸ್ಟ್‌ 29ರಂದು ಪೊಲೀಸರು ದೂರು ದಾಖಲಿಸಿದ್ದರು. ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.