ADVERTISEMENT

ಗ್ರಾಮ ಒನ್‌ನಲ್ಲಿ ಪಡಿತರ ಚೀಟಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2022, 19:56 IST
Last Updated 5 ಫೆಬ್ರುವರಿ 2022, 19:56 IST

ಬೆಂಗಳೂರು: ‘ರಾಜ್ಯದಲ್ಲಿ ಸುಮಾರು 4 ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗೆ ಮಂಜೂರಾತಿ ನೀಡಲಾಗಿದ್ದು, ಅವುಗಳನ್ನು ‘ಗ್ರಾಮ ಒನ್’ ಸೇವಾ ಕೇಂದ್ರಗಳ ಮೂಲಕ ವಿತರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಗ್ರಾಮ ಒನ್’ ಯೋಜನೆಯ ಪ್ರಗತಿ ಕುರಿತು ಯೋಜನೆ ಆರಂಭಗೊಂಡಿರುವ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಈ ಸೇವಾ ಕೇಂದ್ರಗಳ ಕಂಪ್ಯೂಟರ್ ನಿರ್ವಾಹಕರ ಜೊತೆ ಶನಿವಾರ ಅವರು ವಿಡಿಯೊ ಸಂವಾದ ನಡೆಸಿದರು.

‘ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಈ ಸೇವಾ ಕೇಂದ್ರಗಳನ್ನು ಆದ್ಯತೆಯ ಮೇಲೆ ಆರಂಭಿಸಬೇಕು ಮತ್ತು ಈ ಕೇಂದ್ರಗಳಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಹೆಚ್ಚಿನ ಪ್ರಚಾರ ನೀಡಬೇಕು’ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

ADVERTISEMENT

‘ಸರ್ಕಾರ ತನ್ನ ಅಧಿಕಾರ ಮತ್ತು ಜವಾಬ್ದಾರಿಯನ್ನು ಈ ಸೇವಾ ಕೇಂದ್ರಗಳ ನಿರ್ವಾಹಕರಿಗೆ ವಹಿಸಿದೆ. ಹೀಗಾಗಿ, ಕೇಂದ್ರಗಳ ಸಿಬ್ಬಂದಿ ಜನರ ಸಮಸ್ಯೆಗಳನ್ನು ಸೌಜನ್ಯದಿಂದ ಆಲಿಸಿ, ಪರಿಹಾರ ನೀಡಬೇಕು’ ಎಂದೂ ಸೂಚಿಸಿದರು.

‘ಎಲ್ಲ ಮಾಹಿತಿಗಳನ್ನು ಜನರು ಕಾಗದ ರೂಪದಲ್ಲಿಯೇ ಪಡೆಯುವ ಅವಶ್ಯಕತೆಯಿಲ್ಲ. ‘ಕುಟುಂಬ’ ಜನಸೇವಕ ತಂತ್ರಾಂಶದಲ್ಲಿ ಮಾಹಿತಿಗಳು ಲಭಿಸುತ್ತವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.