ಮಂಗಳೂರು: ‘ದೇಶದ ಸ್ವಾತಂತ್ರ್ಯ ಮತ್ತು ಅಖಂಡತೆಗಾಗಿ ಬಲಿದಾನ ಮಾಡಿರುವ ವಿ.ಡಿ. ಸಾವರ್ಕರ್ ಬಗ್ಗೆ ಗೊತ್ತಿಲ್ಲದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರು ಬಾಯಿಗೆ ಬಂದಂತೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ನಡುವೆ ತಾರತಮ್ಯ ಮಾಡುತ್ತಿರುವುದು ದುರದೃಷ್ಟಕರ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ.
ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ಗೆ ತಿರುಗೇಟು ನೀಡಿರುವ ಅವರು, ‘ಸಾವರ್ಕರ್ ಅವರ ಬಗ್ಗೆ ಓದಿ, ನಂತರ ಮಾತನಾಡಿ’ ಎಂದಿದ್ದಾರೆ.
ಯಾವಾಗಲೂ ಒಂದೇ ಕುಟುಂಬದ ಹೆಸರನ್ನಿಟ್ಟು ಅಭ್ಯಾಸ ಆದವರಿಗೆ ಸಾವರ್ಕರ್ ಅವರ ಹೆಸರು ಕೇಳುವಾಗ ಆಶ್ಚರ್ಯವಾಗುವುದು ಸಹಜವೇ. ಒಂದು ವೇಳೆ ಈಗ ಕಾಂಗ್ರೆಸ್ ಸರ್ಕಾರ ಇದ್ದರೆ, ಖಂಡಿತ ಆ ಮೇಲ್ಸೇತುವೆಗೆ ಇಂದಿರಾ ಗಾಂಧಿಯದ್ದೋ ಅಥವಾ ರಾಜೀವ ಗಾಂಧಿಯದ್ದೋ ಹೆಸರು ಇಡಲಾಗುತ್ತಿತ್ತು ಎನ್ನುವುದು ಲೋಕ ತಿಳಿದ ಸತ್ಯ ಎಂದು ವ್ಯಂಗ್ಯವಾಡಿದ್ದಾರೆ.
ನೆಹರೂ ತಾರಾಲಯಕ್ಕೆ ಹೆಸರಿಡುವಾಗ ನೆಹರೂ ನಮ್ಮ ರಾಜ್ಯದವರಲ್ಲ, ಶಿಕ್ಷಣ ಸಂಸ್ಥೆಗಳಿಗೆ ರಾಜೀವ್ ಗಾಂಧಿಯ ಹೆಸರಿಡುವಾಗ ಅವರ ನಮ್ಮವರಲ್ಲ ಎಂದು ಬಿಜೆಪಿ ನಾಯಕರಾಗಲಿ ಅಥವಾ ನಮ್ಮ ಕಾರ್ಯಕರ್ತ ಪರಿವಾರವಾಗಲಿ ಯಾರೂ ಕೂಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.