ADVERTISEMENT

ಧಾರ್ಮಿಕ ನಂಬಿಕೆ ಬದಲಾಗಿದೆ, ಸಾಮಾಜಿಕ ಸ್ಥಿತಿಗತಿಯಲ್ಲ: ಆರ್ಚ್‌ ಬಿಷಪ್ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 23:28 IST
Last Updated 25 ಫೆಬ್ರುವರಿ 2021, 23:28 IST

ಬೆಂಗಳೂರು: ‘ದೇಶದ ಪ್ರತಿ ಪ್ರಜೆಯೂ ತನಗಿಷ್ಟ ಬಂದ ಧರ್ಮವನ್ನು ಪಾಲಿಸಲು ಸಂವಿಧಾನ ಅವಕಾಶ ನೀಡಿದೆ. ಇದು ಮೂಲಭೂತ ಹಕ್ಕೂ ಕೂಡ. ಲೋಕಸಭೆಯ ಸದಸ್ಯರಾದವರಿಗೆ ಈ ಅಂಶ ನೆನಪಿಗೆ ಬಾರದಿರುವುದು ದುರದೃಷ್ಟಕರ’ ಎಂದು ಬೆಂಗಳೂರಿನ ಆರ್ಚ್‌ ಬಿಷಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದವರಿಗೆ ಸವಲತ್ತು ಬೇಡ’ ಎಂದು ಸಂಸದ ಪ್ರತಾಪ ಸಿಂಹ ಹೇಳಿಕೆಗೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ.

‘ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ಕ್ರೈಸ್ತ ಸಮುದಾಯವು ದೇಶದ ಶಿಕ್ಷಣ, ಆರೋಗ್ಯ, ಸಾಹಿತ್ಯ, ಸಮಾಜ ಸೇವೆ ಕ್ಷೇತ್ರಗಳಲ್ಲಿ ಅಪಾರವಾಗಿ ದುಡಿದು, ದೀನ ದಲಿತರ ಸೇವೆಯನ್ನು ಮಾಡಿಕೊಂಡು ಬರುತ್ತಿದೆ. ಕ್ರೈಸ್ತ ಸಮುದಾಯವು ನೀಡುವ ಸೇವೆಗಳಲ್ಲಿ ಜಾತಿ, ಮತ, ನಂಬಿಕೆ, ಧರ್ಮ, ಪ್ರದೇಶಗಳ ಹಂಗಿಲ್ಲ. ಮತಾಂತರವಾದ ಬುಡಕಟ್ಟು ಜನರಿಗೆ ಯಾವುದೇ ಸವಲತ್ತುಗಳನ್ನು ನೀಡುವುದು ಬೇಡ ಎಂದಿರುವ ನೀವು ಸಂವಿಧಾನದ ಮೂಲ ಆಶಯಗಳನ್ನೇ ಮರೆತಂತಿದೆ’ ಎಂದು ಬೆಂಗಳೂರು ಮಹಾಧರ್ಮಕ್ಷೇತ್ರ ಆಕ್ರೋಶ ವ್ಯಕ್ತಪಡಿಸಿದೆ.

ADVERTISEMENT

‘ಕ್ರೈಸ್ತ ಧರ್ಮಕ್ಕೆ ಮತಾಂತರವಾದವರು ಆದಿವಾಸಿಗಳು, ತಳ ಸಮುದಾಯಗಳಾದ ಬೆಸ್ತ, ಅಂಬಿಗ, ತಿಗಳ, ಕುಂಬಾರರಂತಹ ಶೋಷಿತವರ್ಗದವರು. ಮತಾಂತರವಾದ ನಂತರ ಅವರ ಧಾರ್ಮಿಕ ನಂಬಿಕೆಗಳು ಬದಲಾಗಿವೆಯೇ ವಿನಾ ಅವರ ಸಾಮಾಜಿಕ ಸ್ಥಿತಿಗತಿ ಬಹುತೇಕ ಹಿಂದಿನಂತೆಯೇ ಇದೆ. ಮೈಸೂರು ಜಿಲ್ಲೆಯಲ್ಲೇ ಇಂತಹ ನೂರಾರು ಕುಟುಂಬಗಳಿವೆ. ಪರಿಸ್ಥಿತಿ ಹೀಗಿರುವಾಗ ತಾವೊಬ್ಬ ಜನಪ್ರತಿನಿಧಿಯಾಗಿ ಈ ನಿಮ್ಮ ನಡೆ ಅಲ್ಪಸಂಖ್ಯಾತ ವಿರೋಧಿಯಾಗಿದೆ’ ಎಂದು ಮಹಾಧರ್ಮಕ್ಷೇತ್ರದ ವಕ್ತಾರ ಜೆ.ಎ. ಕಾಂತರಾಜ್‌, ಪ್ರತಾಪ ಸಿಂಹ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.