ಬೆಂಗಳೂರು: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷದ ಗಣರಾಜ್ಯೋತ್ಸವ ಪ್ರಯುಕ್ತ ಬುಧವಾರ ಸಂಜೆ ನಾಡಿನಾದ್ಯಂತದ ಪ್ರಮುಖ ನೃತ್ಯ ಗುರುಗಳು ಸೇರಿ 'ನೃತ್ಯ ಭಾರತಿ' ಎಂಬ ವೈವಿಧ್ಯಮಯ ನೃತ್ಯಗಳ ಕಾರ್ಯಕ್ರಮವನ್ನು ಅರ್ಪಿಸಲಿದ್ದಾರೆ.
ರಂಗಕರ್ಮಿ, ಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ ಅವರ ಸಂಘಟಿಸಿರುವ, ಸಹನಾಬಿಳೂರಕರ್ ನಿರೂಪಣೆಯ ಈ ಕಾರ್ಯಕ್ರಮವು ಬುಧವಾರ ಸಂಜೆ 6.30ರಿಂದ ಪ್ರಜಾವಾಣಿಯ ಫೇಸ್ಬುಕ್ ಪುಟದಲ್ಲಿ (fb.com/prajavani.net) ಪ್ರೀಮಿಯರ್ ಪ್ರದರ್ಶನವಾಗಲಿದೆ.
ಮೈಸೂರಿನ ಕೃಪಾ ಫಡ್ಕೆ ತಂಡದವರಿಂದ ಭರತ ನಾಟ್ಯದ 'ಪುಷ್ಪಾಂಜಲಿ' ಹಾಗೂ ಅಮೆರಿಕಾದ ಲೂಯಿವಿಲೆಯ ಅಖಿಲಾ ಅಯ್ಯರ್ ತಂಡವು ತಮಿಳುನಾಡಿನ ಕುಂಭಕೋಣಂ ಕೋಲಾಟಂ ಪ್ರದರ್ಶಿಸಲಿದೆ.
ಬೆಂಗಳೂರಿನ ಶುಭಾ ಧನಂಜಯ ತಂಡದಿಂದ ಕಥಕ್, ಕಲಬುರಗಿಯ ಶುಭಾಂಗಿ ಸುಧೀಂದ್ರ ತಂಡದಿಂದ ಮಹಾರಾಷ್ಟ್ರದ ಗೊಂದಾಲ್ ನೃತ್ಯ, ಬೆಂಗಳೂರಿನ ವೀಣಾಮೂರ್ತಿ ವಿಜಯ್ ತಂಡದಿಂದ ಕೂಚಿಪುಡಿ ನೃತ್ಯ, ಬೆಂಗಳೂರಿನ ಸ್ನೇಹಾ ಕಪ್ಪಣ್ಣ ಅವರ ಭ್ರಮರಿ ನೃತ್ಯ ರೆಪರ್ಟರಿ ವತಿಯಿಂದ ಪಟದ ಕುಣಿತ, ತುಮಕೂರಿನ ಬಾಲಾ ವಿಶ್ವನಾಥ್ ತಂಡದಿಂದ ಭರತನಾಟ್ಯಕ್ಕೆ ವಚನವನ್ನು ಅಳವಡಿಸಿದ 'ವಚನಾಂಜಲಿ', ಬೆಂಗಳೂರಿನ ವೀಣಾ ಭಟ್ ತಂಡದಿಂದ ಅಸ್ಸಾಂನ ಬಿಹು ನೃತ್ಯ, ರಾಧಿಕಾ ಮಕರಂ ಅವರ ತಂಡದಿಂದ ಒಡಿಸ್ಸೀ ನೃತ್ಯ, ಶಿವಮೊಗ್ಗದ ಸಹನಾ ಚೇತನ್ ತಂಡದಿಂದ 'ಶಿವ ಸುಂದರ ಭಾರತದ ಪುಣ್ಯ ನೆಲ' ನೃತ್ಯ ಹಾಗೂ ಬೆಂಗಳೂರಿನ ಲಿಂಗಣ್ಣ ಅವರ ನೇತೃತ್ವದ. ಕರ್ನಾಟಕ ಜಾನಪದ ಬೀಸು ಕಂಸಾಳೆ ಸಂಘದಿಂದ ಬೀಸು ಕಂಸಾಳೆ ನೃತ್ಯವು ಪ್ರದರ್ಶನಗೊಳ್ಳಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.