ಬಳ್ಳಾರಿ: ರಾಜ್ಯದಲ್ಲಿ ಗುತ್ತಿಗೆ ಆಧಾರದಲ್ಲಿಕಾರ್ಯನಿರ್ವಹಿಸುತ್ತಿರುವ 2 ಸಾವಿರ ಆಯುಶ್ ವೈದ್ಯರೆಲ್ಲರೂ ಜು.15ರಂದು ಸಾಮೂಹಿಕವಾಗಿ ರಾಜಿನಾಮೆ ನೀಡಲಿದ್ದಾರೆ ಎಂದು ರಾಜ್ಯ ಗುತ್ತಿಗೆ ಆಯುಶ್ ವೈದ್ಯರ ಸಂಘದ ರಾಜ್ಯ ಘಟಕದ ಖಜಾಂಚಿ ಡಾ.ಆನಂದ್ ಎಸ್.ಕಿರಿಶ್ಯಾಳ ತಿಳಿಸಿದರು.
15-20 ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರೂ ಕಾಯಂಗೊಳಿಸಿಲ್ಲ. ವೇತನದಲ್ಲಿಯೂ ತಾರತಮ್ಯ ನಡೆಯುತ್ತಿದೆ. ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಲೋಪತಿ ವೈದ್ಯರ ಬೇಡಿಕೆಗಳನ್ನು ಮಾತ್ರ ಈಡೇರಿಸಿ ಅವರ ವೇತನವನ್ನು ಹೆಚ್ಚಿಸಿ, ಆಯುಶ್ ವೈದ್ಯರನ್ನು ಸರ್ಕಾರ ಕಡೆಗಣಿಸಿದೆ. ಖಾಸಗಿ ವೈದ್ಯರು ಕೂಡ ಹೊರರೋಗಿಗಳ ಚಿಕಿತ್ಸೆಯನ್ನು ಹಂತಹಂತವಾಗಿ ಸ್ಥಗಿತಗೊಳಿಸಲಿದ್ದಾರೆ. ಜ್ವರ ತಪಾಸಣಾ ಕೇಂದ್ರಗಳಲ್ಲಿ ಬಹುತೇಕ ಆಯುಶ್ ಮತ್ತು 27 ಸಾವಿರ ಖಾಸಗಿ ವೈದ್ಯರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.
ಈಗಿನ ಕಾಲದಲ್ಲಿ ಕೇವಲ ₹20 ಸಾವಿರದಲ್ಲಿ ಜೀವನ ನಡೆಯುವುದು ಕಷ್ಟಕರವಾಗಿದೆ. ಕನಿಷ್ಠ ₹58,500 ವೇತನ ಪಾವತಿಸಬೇಕು. ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಮೌಖಿಕ ಭರವಸೆ ನೀಡಿದರೆ, ಈ ಬಾರಿ ಒಪ್ಪುವುದಿಲ್ಲ. ಲಿಖಿತವಾಗಿ ಬೇಡಿಕೆಗಳನ್ನು ಈಡೇರಿಸಿದ ನಂತರವೇ ಸೇವೆ ಮುಂದುವರೆಸಲಾಗುವುದು ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪ್ರಕಾಶ ಪಾಟೀಲ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಆಯುಶ್ ವೈದ್ಯಾಧಿಕಾರಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಜೀವನೇಶ್ವರಯ್ಯ, ಡಾ.ಬಸವರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.