ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ‘ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆ ವತಿಯಿಂದ ಸೋಮವಾರ ಧ್ವಜಾರೋಹಣ ನೆರವೇರಿಸಲಾಗುವುದು. ಮುಂದಿನ ಬದಲಾವಣೆಯನ್ನು ಅಂತಿಮವಾಗಿ ಮುಖ್ಯಮಂತ್ರಿ ತಿಳಿಸುತ್ತಾರೆ’ ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ಭಾನುವಾರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಧ್ವಜಾರೋಹಣಕ್ಕೆ ಈಗಾಗಲೇ ಎ.ಸಿ ದರ್ಜೆ ಅಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ. ಕೇವಲ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಮಾತ್ರವಲ್ಲ, ಮುಂಬರುವ ಎಲ್ಲಾ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವಕ್ಕೆ ಅಲ್ಲಿ ಧ್ವಜಾರೋಹಣ ನೆರವೇರಿಸಲಾಗುವುದು’ ಎಂದರು.
‘75 ವರ್ಷಗಳಿಂದ ಅಲ್ಲಿ ಯಾರೂ ಧ್ವಜಾರೋಹಣ ಮಾಡಿರಲಿಲ್ಲ, ನೆರವೇರಿಸಲು ಯಾರನ್ನೂ ಬಿಟ್ಟಿರಲಿಲ್ಲ. ಈ ಕುರಿತು ಅರ್ಜಿ ಬಂದಾಗೆಲ್ಲಾ ಅದನ್ನು ಮೂಲೆಗೆ ಬಿಸಾಡಿದ್ದರು. ರಾಜ್ಯದ ಒಂದೊಂದು ಇಂಚು ಜಾಗದಲ್ಲೂ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕು. ಅಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಜನರು ಹಾಗೂ ಕಾನೂನು ತಜ್ಞರ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.