ADVERTISEMENT

ಜಲಸನ್ನಿಧಿ ನವೀಕರಣ: ರೋಹಿಣಿ ಸಿಂಧೂರಿಗೆ ಮತ್ತೊಂದು ತನಿಖೆಯ ಕಂಟಕ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 14:15 IST
Last Updated 21 ಜೂನ್ 2021, 14:15 IST

ಮೈಸೂರು: ಮೈಸೂರು ಜಿಲ್ಲಾಧಿಕಾರಿಯ ನಿವಾಸ ‘ಜಲಸನ್ನಿಧಿ’ಯಲ್ಲಿ ನಡೆಸಿರುವ ₹ 16.35 ಲಕ್ಷ ವೆಚ್ಚದ ನವೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ, ಏಳು ದಿನದೊಳಗೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿದ್ದಾರೆ.

ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಾ.ರಾ.ಮಹೇಶ್‌ ಜೂನ್‌ 5ರಂದು ಈ ಬಗ್ಗೆ ಮುಖ್ಯಮಂತ್ರಿಹಾಗೂ ಮುಖ್ಯ ಕಾರ್ಯದರ್ಶಿಗೆ ಸುದೀರ್ಘ ಪತ್ರ ಬರೆದಿದ್ದರು.

‘ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿಯಿಲ್ಲದೆ ‘ಜಲಸನ್ನಿಧಿ’ಯಲ್ಲಿ ನವೀಕರಣ ಕಾಮಗಾರಿ ನಡೆಸಿ, ನೆಲಹಾಸಿಗೆ ವಿಟ್ರಿಫೈಡ್‌ ಟೈಲ್ಸ್‌ ಅಳವಡಿಸಿದ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಅಮಾನತುಗೊಳಿಸಬೇಕು’ ಎಂದು ಸಾ.ರಾ.ಮಹೇಶ್‌ ಆ ಪತ್ರದಲ್ಲಿ ಆಗ್ರಹಿಸಿದ್ದರು. ಯಾವ್ಯಾವ ನಿಯಮಾವಳಿ ಉಲ್ಲಂಘನೆಯಾಗಿದ್ದವು ಎಂಬುದನ್ನು ಉಲ್ಲೇಖಿಸಿದ್ದರು.

ADVERTISEMENT

‌ಶಾಸಕರ ಈ ದೂರಿನ ಅನ್ವಯ ಜೂನ್‌ 18ರಂದು ತನಿಖೆ ಆದೇಶಿಸಲಾಗಿದೆ.ಇದರಿಂದ ಐಎಎಸ್‌ ಅಧಿಕಾರಿ ಸಿಂಧೂರಿ ಅವರಿಗೆ ಮತ್ತೊಂದು ತನಿಖೆಯ ಕಂಟಕ ಎದುರಾಗಿದೆ.

‘ತನಿಖೆ ನಡೆಸುವಂತೆ ಸೂಚಿಸಿರುವ ಆದೇಶದ ಪ್ರತಿ ಸೋಮವಾರ ಲಭ್ಯವಾಗಿದೆ. ನಿಯಮಾವಳಿಯಂತೆ ತನಿಖೆ ನಡೆಸಿ, ವರದಿ ಸಲ್ಲಿಸುವೆ’ ಎಂದು ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ನಿವಾಸದ ಜಲಸನ್ನಿಧಿಯ ಆವರಣದಲ್ಲಿ ಅನುಮತಿ ಪಡೆಯದೆ ಈಜುಕೊಳ, ಜಿಮ್‌ ನಿರ್ಮಿಸಿದ್ದರ ಕುರಿತಂತೆ ಸಾ.ರಾ.ಮಹೇಶ್‌, ಜೆಡಿಎಸ್‌ ಮುಖಂಡ ಕೆ.ವಿ.ಮಲ್ಲೇಶ್‌ ಹಾಗೂ ತುಮಕೂರಿನ ವಿಶ್ವಮಾನವ ಹಕ್ಕುಗಳ ಸಂಘಟನೆಯ ಅಧ್ಯಕ್ಷ ಸಿದ್ಧಲಿಂಗೇಗೌಡ ದೂರಿನ ಮೇರೆಗೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಸೂಚನೆಯಂತೆ ಈಗಾಗಲೇ ಜಿ.ಸಿ.ಪ್ರಕಾಶ್‌ ತನಿಖೆ ನಡೆಸಿದ್ದಾರೆ.

ಈ ತನಿಖೆಯ ವರದಿಯನ್ನು ಶನಿವಾರವೇ (ಜೂನ್ 19) ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ ಎಂಬುದು ಮೂಲಗಳಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.