ADVERTISEMENT

ಗುತ್ತಿಗೆದಾರರಿಗೆ ₹2,500 ಕೋಟಿ ಬಿಡುಗಡೆ: ಬೋಸರಾಜು ಭರವಸೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 18:57 IST
Last Updated 23 ಜನವರಿ 2025, 18:57 IST
ಎನ್.ಎಸ್. ಬೋಸರಾಜು
ಎನ್.ಎಸ್. ಬೋಸರಾಜು   

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಲ್ಲಿ ಬಾಕಿಯಿರುವ ಬಿಲ್‌ನಲ್ಲಿ ಶೇ 50ರಷ್ಟು ಮೊತ್ತವನ್ನು ಮಾರ್ಚ್‌ ಅಂತ್ಯದೊಳಗೆ ಪಾವತಿಸುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಸಚಿವರು ಭರವಸೆ ನೀಡಿದ್ದಾರೆ.

ಸಣ್ಣ ನೀರಾವರಿ ಇಲಾಖೆ ಸಚಿವ ಎನ್.ಎಸ್. ಬೋಸರಾಜು ಅವರು ಗುತ್ತಿಗೆದಾರರೊಂದಿಗೆ ಗುರುವಾರ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು. ‘ಸುಮಾರು ₹2 ಸಾವಿರ ಕೋಟಿ ಬಿಲ್‌ ಬಾಕಿ ಇದ್ದು, ಅದನ್ನು ಜ್ಯೇಷ್ಠತೆ ಆಧಾರದಲ್ಲಿ ಕೂಡಲೇ ಬಿಡುಗಡೆ ಮಾಡಬೇಕು. ವಿಶೇಷ ಎಲ್‌ಒಸಿ
ಗಳನ್ನು ನೀಡಬಾರದು. ದೊಡ್ಡ ಮೊತ್ತದ ಪ್ಯಾಕೇಜ್‌ಗಳನ್ನು ಮಾಡಬಾರದು’ ಎಂದು ಗುತ್ತಿಗೆದಾರರು ಮನವಿ ಮಾಡಿಕೊಂಡರು.

‘ಮಾರ್ಚ್‌ ಅಂತ್ಯದೊಳಗೆ ಬಾಕಿ ಬಿಲ್‌ನ ಮೊತ್ತದಲ್ಲಿ ₹1,000 ಕೋಟಿ ಪಾವತಿಸಲಾಗುತ್ತದೆ. ಜ್ಯೇಷ್ಠತೆಯನ್ನು ಮೀರದಂತೆ ಹಾಗೂ ವಿಶೇಷ ಎಲ್ಒಸಿ ಗಳನ್ನೂ ನೀಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಬೋಸರಾಜು ತಿಳಿಸಿದರು.

ADVERTISEMENT

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ, ಸಮಸ್ಯೆಗಳನ್ನು ಈಡೇರಿಸಲು ಭರವಸೆ ನೀಡಿದರು.

‘ಸುಮಾರು ₹3 ಸಾವಿರ ಕೋಟಿ ಬಿಲ್‌ ಬಾಕಿಯಲ್ಲಿ ₹1,500 ಕೋಟಿ ಪಾವತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯಮಂತ್ರಿಯವರೊಂದಿಗೆ ನಡೆಯುವ ಸಭೆಯಲ್ಲಿ ಗುತ್ತಿಗೆದಾರರನ್ನೂ ಕರೆದು, ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.