ADVERTISEMENT

ಉದ್ಯೋಗ ಖಾತ್ರಿ ಯೋಜನೆಗೆ ₹959 ಕೋಟಿ: ಈಶ್ವರಪ್ಪ

₹117 ಕೋಟಿ ಹೆಚ್ಚುವರಿ ಸೇರಿ ಬಾಕಿ ಮೊತ್ತ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 16:57 IST
Last Updated 12 ಸೆಪ್ಟೆಂಬರ್ 2021, 16:57 IST
ಕೆ.ಎಸ್‌ ಈಶ್ವರಪ್ಪ
ಕೆ.ಎಸ್‌ ಈಶ್ವರಪ್ಪ    

ಬಳ್ಳಾರಿ: ‘ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ರಾಜ್ಯಕ್ಕೆ ಬರಬೇಕಾದ ಬಾಕಿ ಸೇರಿದಂತೆ ಕೇಂದ್ರ ಸರ್ಕಾರ ₹ 959 ಕೋಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ₹ 117 ಕೋಟಿ ಹೆಚ್ಚುವರಿ ಹಣವೂ ಸೇರಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದರು.

ಖಾಸಗಿ ಭೇಟಿಗೆ ಬಳ್ಳಾರಿಗೆ ಆಗಮಿ ಸಿದ್ದ ಅವರು ಭಾನುವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ‘ರಾಜ್ಯಕ್ಕೆ ಉದ್ಯೋಗ ಖಾತ್ರಿ ಯೋಜನೆ ಬಾಕಿ ಬರಬೇಕಿ ತ್ತು. ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆದಿ ದ್ದೆ. ಇದೇ 7ರಂದು ದೆಹಲಿಗೆ ತೆರಳಿ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್‌ ಸಿಂಗ್‌ ಅವರನ್ನು ಕಂಡು ಹಣ ಬಿಡುಗಡೆ ಮನವಿ ಮಾಡಿದ್ದೆ’ ಎಂದು ತಿಳಿಸಿದರು.

‘ಕೇಂದ್ರ ನಮ್ಮ ಮನವಿಗೆ ಸ್ಪಂದಿ ಸಿದೆ. ಬಾಕಿ ಮೊತ್ತವನ್ನೂ ಪಾವತಿಸಿದೆ. ರಾಜ್ಯಕ್ಕೆ 13 ಕೋಟಿ ಮಾನವ ದಿನಗಳ ಗುರಿ ಕೊಡಲಾಗಿತ್ತು. ಈಗಾಗಲೇ 9 ಕೋಟಿ ಮಾನವ ದಿನಗಳ ಗುರಿ ಸಾಧಿಸ ಲಾಗಿದೆ. ಮತ್ತೆ 7 ಕೋಟಿ ಹೆಚ್ಚುವರಿ ಮಾನವ ದಿನಕ್ಕೆ ಬೇಡಿಕೆ ಇಡಲಾಗಿದೆ. ನರೇಗಾದಲ್ಲಿ ರಾಜ್ಯ ದೇಶದಲ್ಲಿಯೇ ನಂ.1 ಸ್ಥಾನದಲ್ಲಿದೆ’ ಎಂದು ಹೇಳಿದರು.

ADVERTISEMENT

‘ನರೇಗಾ ಯೋಜನೆ ಬಳಸಿಕೊಂಡು ರಾಜ್ಯದ ಕೆರೆಗಳ ಹೂಳು ತೆಗೆಯಲಾಗುತ್ತಿದೆ. ಕೆರೆಗಳ ಒತ್ತುವರಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಿಕ್ಕ ಒಂದೂವರೆ ವರ್ಷದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ 28 ಸಾವಿರ ಕೆರೆಗಳ ಹೂಳು ತೆಗೆಯಲಾಗುವುದು’ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.

ನರೇಗಾ ಯೋಜನೆ ಬಳಸಿ ಸಣ್ಣಪುಟ್ಟ ರೈತರು ತೋಟಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ತಮ್ಮದೇ ತೋಟದಲ್ಲಿ ಕೆಲಸ ಮಾಡಿದರೂ ಕೂಲಿ ಪಾವತಿಸಲಾಗುತ್ತಿದೆ ಎಂದರು.

ವರದಿ ಬಂದ ಬಳಿಕ ಕ್ರಮ

ಬಳ್ಳಾರಿ: ಗ್ರಾಮೀಣಾಭಿವೃದ್ಧಿ ಇಲಾಖೆಯ ಹಣವನ್ನು ಬೇನಾಮಿ ಖಾತೆಯಲ್ಲಿಟ್ಟಿ ದ್ದ ಪ್ರಕರಣ ಕುರಿತು ವಿಚಾರಣೆ ನಡೆಯುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರಪ್ಪ ಹೇಳಿದರು. ಎಚ್‌.ಕೆ.ಪಾಟೀಲರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸಂದರ್ಭ ದಲ್ಲಿ ಬೇನಾಮಿ ಖಾತೆಯಲ್ಲಿ ಹಣ ಇಡಲಾಗಿತ್ತು ಎಂಬ ಪ್ರಕರಣ ಕುರಿತು ಉನ್ನತ ಅಧಿಕಾರಿ ನೇತೃತ್ವದ ಸಮಿತಿ ವಿಚಾರಣೆ ನಡೆಸುತ್ತಿದೆ. ಅಲ್ಲದೆ, ವಿಧಾನ ಪರಿಷತ್‌ ಸದಸ್ಯರನ್ನು ಒಳಗೊಂಡ ಸಮಿತಿಯೂ ಪರಿಶೀಲಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.