ADVERTISEMENT

ಆರ್‌ಎಸ್‌ಎಸ್‌ನಿಂದ ದಾಂಪತ್ಯ ಪಾಠ

ಬೆಂಗಳೂರಲ್ಲೂ ಇದೆ ಗರ್ಭಸಂಸ್ಕಾರ ಕೇಂದ್ರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 20:16 IST
Last Updated 1 ಆಗಸ್ಟ್ 2019, 20:16 IST

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಶಿಸ್ತಿಗೆ ಹೆಸರುವಾಸಿಯಾದ ಸಂಘಟನೆ. ನವವಿವಾಹಿತರಿಗೆ ಗರ್ಭಸಂಸ್ಕಾರಮಾಡಿಸುವ ಮೂಲಕ ಉತ್ತಮ ಸಂಸ್ಕಾರದಲ್ಲಿ ಮಕ್ಕಳ ಜನನವಾಗುವಂತಹ ವ್ಯವಸ್ಥೆಯೊಂದನ್ನೂ ಅದು ಮಾಡುತ್ತಿದೆ.

ಆರ್‌ಎಸ್‌ಎಸ್‌ನ ‘ಕುಟುಂಬ ಪ್ರಬೋಧಿನಿ’ ಘಟಕ ಈ ಗರ್ಭಸಂಸ್ಕಾರ ನಡೆಸುವ ಯೋಜನೆಯ ಹೊಣೆ ಹೊತ್ತಿದ್ದು, ನಗರ ಸಹಿತ ರಾಜ್ಯದ ಹಲವೆಡೆ ಕಳೆದ 10 ವರ್ಷಗಳಿಂದ ಇದನ್ನು ಮಾಡುತ್ತ ಬಂದಿದೆ.

ನಗರದ ತ್ಯಾಗರಾಜನಗರದಲ್ಲಿರುವ ‘ಸುಪ್ರಜಾ’ ಗರ್ಭಧಾರಣಾ ಕೇಂದ್ರದಲ್ಲಿ ಕಳೆದ ಒಂದು ವರ್ಷದಿಂದ ಗರ್ಭಸಂಸ್ಕಾರದ ಜತೆಗೆ ನವದಂಪತಿಗೆ ಉತ್ತಮ ಸಂಸ್ಕಾರದ ಮಗುವಿನ ಜನನಕ್ಕೆ ಅಗತ್ಯವಾಗಿ ಕೈಗೊಳ್ಳಬೇಕಾದ ಜೀವನ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ADVERTISEMENT

‘ಒಂದು ವರ್ಷದಲ್ಲಿ ನೂರಕ್ಕೂ ಅಧಿಕ ಮಂದಿ ಇಲ್ಲಿಗೆ ಬಂದು ಮಾಹಿತಿ ಪಡೆದುಕೊಂಡು ಹೋಗಿದ್ದಾರೆ. ಅವರಿಗೆ ಉತ್ತಮ ಫಲಿತಾಂಶವೂ ದೊರೆತಿದೆ. ದೇಶದ ನಾನಾ ಭಾಗಗಳಲ್ಲಿ ಇಂತಹ ಮಾಹಿತಿ ನೀಡುವ ಕೆಲಸ ಆರ್‌ಎಸ್‌ಎಸ್‌ನಿಂದ ನಡೆಯುತ್ತಿದೆ’ ಎಂದು ‘ಸುಪ್ರಜಾ’ ಕೇಂದ್ರದ ಆಡಳಿತಾಧಿಕಾರಿ ಚಂದ್ರ ಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು. ಈ ಕೇಂದ್ರದಲ್ಲಿ ಮಕ್ಕಳಾಗದ ದಂಪತಿಗೆ ಕೌನ್ಸೆಲಿಂಗ್‌ ನಡೆಸುವ, ಆಯುರ್ವೇದ ಔಷಧ ನೀಡಿ ಗರ್ಭಧಾರಣೆಗೆ ನೆರವಾಗುವ ಸೌಲಭ್ಯವೂ ಇದೆ ಎಂದರು.

‘ನಮ್ಮ ಆಹಾರ, ಜೀವನ ಶೈಲಿ, ನಡವಳಿಕೆ ಉತ್ತಮ ಸಂಸ್ಕಾರದಿಂದ ಕೂಡಿದ್ದರೆ ಹುಟ್ಟುವ ಮಕ್ಕಳೂ ಅದನ್ನು ಗಳಿಸಿಕೊಂಡಿರುತ್ತಾರೆ. ಸಂಸ್ಕಾರ ಎಂಬುದು ಜನ್ಮಜಾತವಾಗಿ ಬರಬೇಕು ಎಂಬ ಪರಿಕಲ್ಪನೆಯಲ್ಲಿ ಈ ಯೋಜನೆಯನ್ನು ಕುಟುಂಬ ಪ್ರಬೋಧಿನಿ ವತಿಯಿಂದ ನಡೆಸಲಾಗುತ್ತಿದೆ’ ಎಂದು ಆರ್‌ಎಸ್‌ಎಸ್‌ನ ಇನ್ನೊಬ್ಬ ಪ್ರಮುಖರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.