ADVERTISEMENT

ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ₹50 ಸಾವಿರ ದಂಡ: ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 14:31 IST
Last Updated 13 ಆಗಸ್ಟ್ 2025, 14:31 IST
   

ಬೆಂಗಳೂರು: ‘ಮಾಹಿತಿ ಹಕ್ಕು ಕಾಯ್ದೆಯ ಅನುಸಾರ ನಿರ್ಮಿತಿ ಕೇಂದ್ರವು ಒಂದು ಸಾರ್ವಜನಿಕ ಪ್ರಾಧಿಕಾರ’ ಎಂಬ ಖಚಿತ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ಅರ್ಜಿದಾರರೊಬ್ಬರಿಗೆ ಮಾಹಿತಿ ನೀಡಲು ನಿರಾಕರಿಸಿದ್ದ ಚಿತ್ರದುರ್ಗ ನಿರ್ಮಿತಿ ಕೇಂದ್ರಕ್ಕೆ ₹50 ಸಾವಿರ ದಂಡ ವಿಧಿಸಿದೆ.

ಈ ಸಂಬಂಧ, ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆದ (ಪಿಐಒ) ಚಿತ್ರದುರ್ಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದ್ದು, ‘ದಂಡದ ಮೊತ್ತವನ್ನು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸಿ’ ಎಂದು ಚಿತ್ರದುರ್ಗ ನಿರ್ಮಿತಿ ಕೇಂದ್ರದ ಸಕ್ಷಮ ಅಧಿಕಾರಿಗಳಿಗೆ ತಾಕೀತು ಮಾಡಿದೆ. 

ಪ್ರಕರಣದ ಪ್ರತಿವಾದಿ ತಿಮ್ಮಯ್ಯ ಅವರ ಪರ ಹೈಕೋರ್ಟ್‌ ವಕೀಲ ಜೆ.ಪ್ರಶಾಂತ್‌ ಮಂಡಿಸಿದ ವಾದವನ್ನು ಮಾನ್ಯ ಮಾಡಿರುವ ನ್ಯಾಯಪೀಠ, ‘ಈ ಪ್ರಕರಣದಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಆಡಳಿತ ಪಾರದರ್ಶಕತೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದು, ‘ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ನಿರ್ಮಿತಿ ಕೇಂದ್ರಗಳನ್ನು ಸಾರ್ವಜನಿಕ ಪ್ರಾಧಿಕಾರಗಳು’ ಎಂದು ಘೋಷಿಸಿದೆ.

ADVERTISEMENT

‘ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಇಲಾಖೆಗಳು ಆರ್‌ಟಿಐ ಕಾಯ್ದೆಗೆ ಒಳಪಟ್ಟಿರುವ ಅನುಸಾರವೇ ನಿರ್ಮಿತಿ ಕೇಂದ್ರವೂ ಮಾಹಿತಿ ಹಕ್ಕು ಕಾಯ್ದೆ–2005ರ (ಆರ್‌ಟಿಐ) ಕಲಂ 2(ಎಚ್) ಪ್ರಕಾರ ಆರ್‌ಟಿಐ ವ್ಯಾಪ್ತಿಗೆ ಒಳಪಡುತ್ತದೆ. ಆದ್ದರಿಂದ, ಈ ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಅರ್ಜಿದಾರರಾದ ಹಿರಿಯೂರಿನ ‘ಭಾರತ ಕೃಷಿಕ ಸಮಾಜ’ದ ಅಧ್ಯಕ್ಷ ಎಚ್‌.ಆರ್‌.ತಿಮ್ಮಯ್ಯ ಕೋರಿರುವ ಮಾಹಿತಿಯನ್ನು ಅವರಿಗೆ ಒದಗಿಸಿ’ ಎಂದು ನಿರ್ದೇಶಿಸಿದೆ.

ನಿರ್ಮಿತಿ ಕೇಂದ್ರದ ಮುಖ್ಯ ಉದ್ದೇಶಗಳು‌:

* ಸರ್ಕಾರಕ್ಕೆ ಹೊಸ ಮನೆಯ ಪರಿಕಲ್ಪನೆಗಳು ಮತ್ತು ನೀತಿಯ ಆಯ್ಕೆಗಳ ಕುರಿತಂತೆ ಮಾರ್ಗದರ್ಶನ ನೀಡುವುದು.

* ಮರುಬಳಕೆ ಮಾಡಬಹುದಾದ ವಸತಿ ಮೂಲಸೌಕರ್ಯದ ಮಾದರಿಗಳನ್ನು ಅಭಿವೃದ್ಧಿಪಡಿಸುವುದು.

* ವೆಚ್ಚ-ಪರಿಣಾಮಕಾರಿ, ಪರಿಸರ ಸ್ನೇಹಿ ಮತ್ತು ಪರ್ಯಾಯ ಕಟ್ಟಡ ಸಾಮಗ್ರಿಗಳು ಹಾಗೂ ತಂತ್ರಜ್ಞಾನಗಳನ್ನು ಉತ್ತೇಜಿಸುವುದು.

* ನಿರ್ಮಿತಿ ಕೇಂದ್ರಗಳ ಚಟುವಟಿಕೆಗಳ ಮೇಲ್ವಿಚಾರಣೆ, ಮಾರ್ಗದರ್ಶನ ಮತ್ತು ಸಲಹೆ ನೀಡುವುದು.

* ವೆಚ್ಚ-ಪರಿಣಾಮಕಾರಿ, ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ಕಟ್ಟಡ ಸಾಮಗ್ರಿಗಳು ಮತ್ತು ಘಟಕಗಳನ್ನು ಉತ್ಪಾದಿಸುವುದು.

* ಉತ್ಪಾದಿತ ಸಾಮಗ್ರಿಗಳನ್ನು ವಿವಿಧ ಸರ್ಕಾರಿ ಇಲಾಖೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವುದು.

* ಒಟ್ಟಾರೆಯಾಗಿ, ನಿರ್ಮಿತಿ ಕೇಂದ್ರಗಳು ಕಟ್ಟಡ ನಿರ್ಮಾಣದಲ್ಲಿ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.