ADVERTISEMENT

ಗ್ರಾಮಗಳತ್ತ ಗ್ರಾಮೀಣಾಭಿವೃದ್ಧಿ ವಿ.ವಿ.

ಇಂಗ್ಲಿಷ್‌, ಗಣಿತ, ವಿಜ್ಞಾನ ವಿಷಯಗಳನ್ನು ಕಲಿಸಲು ಒತ್ತು

ಸತೀಶ ಬೆಳ್ಳಕ್ಕಿ
Published 10 ಜನವರಿ 2021, 19:49 IST
Last Updated 10 ಜನವರಿ 2021, 19:49 IST
ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ
ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ   

ಗದಗ: ಸರ್ಕಾರದ ಶಾಲೆ ದತ್ತು ಯೋಜನೆಯನ್ನು ಇಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ವಿಶ್ವವಿದ್ಯಾಲಯ ‘ಗ್ರಾಮೀಣ ಪ್ರದೇಶದತ್ತ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ’ ಎಂಬ ಪರಿಕಲ್ಪನೆಗೆ ಒಗ್ಗಿಸಿಕೊಂಡು ಜಿಲ್ಲೆಯ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಒತ್ತು ನೀಡಿದೆ. ರಾಜ್ಯದಲ್ಲಿ ಹೆಚ್ಚು ಶಾಲೆಗಳನ್ನು ದತ್ತು ಪಡೆದ ವಿಶ್ವವಿದ್ಯಾಲಯ ಎಂಬ ಹಿರಿಮೆಗೂ ಪಾತ್ರವಾಗಿದೆ.

ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕುಲಸಚಿವ ಪ್ರೊ.ಬಿ.ಎಲ್‌.ಲಕ್ಕಣ್ಣನವರ ಅಧ್ಯಕ್ಷತೆಯಲ್ಲಿ ಸಂಚಾಲನ ಸಮಿತಿ
ಯನ್ನು ವಿಶ್ವವಿದ್ಯಾಲಯ ರಚಿಸಿದೆ. ಗದಗ, ರೋಣ ಮತ್ತು ಶಿರಹಟ್ಟಿ ತಾಲ್ಲೂಕಿನ 11 ಗ್ರಾಮಗಳ 20 ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದೆ. ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಕಾರಣವಾಗಿರುವ ಅಂಶಗಳನ್ನು ಗುರುತಿಸಿ, ಅವುಗಳನ್ನು ಸುಧಾರಿಸಲು ಡಿಡಿಪಿಐ ಹಾಗೂ ಬಿಇಒಗಳ ಸಭೆ ನಡೆಸಿ ಸಮಗ್ರ ಯೋಜನೆ ರೂಪಿಸಲು ಸಿದ್ಧತೆ ನಡೆಸಿದೆ.

‘ಶೈಕ್ಷಣಿಕ ಸಲಹೆಗಾರ ಪ್ರೊ.ಎಂ.ಆರ್‌.ದೊರೆಸ್ವಾಮಿ ಅವರ ಜತೆಗಿನ 20 ವರ್ಷಗಳ ಒಡನಾಟ ಶಾಲೆ ದತ್ತು ಯೋಜನೆ ಬಗ್ಗೆ ವಿಶೇಷ ಆಸಕ್ತಿ ಮೂಡಿಸಿತು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಅರ್ಹ ಶಿಕ್ಷಕರು ಇರುವುದು ಸರ್ಕಾರಿ ಶಾಲೆಗಳಲ್ಲೇ. ಈ ಯೋಜನೆಯನ್ನು ವಿಶ್ವವಿದ್ಯಾಲಯದ ಸಾಮಾಜಿಕ ಜವಾಬ್ದಾರಿಯಾಗಿ ಪರಿಗಣಿಸಿ ಜಿಲ್ಲೆಯ ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯತ್ತ ಒಂದು ಪುಟ್ಟ ಹೆಜ್ಜೆ ಇರಿಸಿದ್ದೇವೆ’ ಎನ್ನುತ್ತಾರೆ ಕುಲಪತಿ ಪ್ರೊ.ವಿಷ್ಣುಕಾಂತ ಎಸ್‌.ಚಟಪಲ್ಲಿ ಹೇಳಿದರು.

ADVERTISEMENT

‘ದತ್ತು ಪಡೆದಿರುವ ಶಾಲೆಗಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದರ ಜತೆಗೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಶಿಕ್ಷಕರಿಗೆ ತರಬೇತಿ ಯೋಜನೆ ಹಾಕಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಸರ್ಕಾರಿ ಶಾಲೆಗಳ ಮೂಲ ಅವಶ್ಯಕತೆ
ಗಳು ಏನು ಎಂಬ ಸಮೀಕ್ಷೆ ನಡೆಸಿದ್ದು, ಅವುಗಳನ್ನು ಸರ್ಕಾರದ ಯೋಜನೆಗಳ ಮೂಲಕವೇ ಅನುಷ್ಠಾನಗೊಳಿಸಲಾಗುವುದು’ ಎಂದು ಅವರು ಹೇಳಿದರು.

‘ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಗ್ರಾಮೀಣ ಜನರ ಬದುಕಿಗೆ ಹೆಚ್ಚು ಹತ್ತಿರವಾಗಿರುವುದರಿಂದ ಹಳ್ಳಿ ಮಕ್ಕಳ ಶೈಕ್ಷಣಿಕ ಮಟ್ಟ ಸುಧಾರಿಸಿ ಅವರ ಶೈಕ್ಷಣಿಕ, ವೃತ್ತಿ ಬದುಕಿಗೆ ಸಂಬಂಧಿಸಿದ ಮಾರ್ಗದರ್ಶನ ನೀಡಲಾಗುವುದು’ ಎಂದು ಕುಲಸಚಿವ ಪ್ರೊ.ಲಕ್ಕಣ್ಣನವರ ತಿಳಿಸಿದರು.

ವಿಶ್ವವಿದ್ಯಾಲಯದ ನೂತನ ಆವರಣದಲ್ಲಿ ‘ಸಾಬರಮತಿ ಆಶ್ರಮ’ ಇದ್ದು, ದತ್ತು ಪಡೆದ ಶಾಲೆ ಮಕ್ಕಳನ್ನು ಅಲ್ಲಿಗೆ ಕರೆತಂದು ಅವರಿಗೆ ಮೌಲ್ಯಶಿಕ್ಷಣ ಹಾಗೂ ಗಾಂಧಿ ವಿಚಾರಧಾರೆಗಳನ್ನು ಪರಿಚಯಿಸುವ ಉದ್ದೇಶ ಇದೆ ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.