ಬೆಂಗಳೂರು: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿದ್ದ ಕರ್ನಾಟಕದ 76 ಮಂದಿ ಭಾನುವಾರ ಹಿಂದಿರುಗಿದ್ದಾರೆ. ಇದರೊಂದಿಗೆ ಅಲ್ಲಿಂದ ಮರಳಿದ ರಾಜ್ಯದ ಜನರ ಸಂಖ್ಯೆ 448ಕ್ಕೆ ತಲುಪಿದೆ.
ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ‘ಆಪರೇಷನ್ ಗಂಗಾ’ ಹೆಸರಿನ ಕಾರ್ಯಾಚರಣೆ ಅಡಿಯಲ್ಲಿ ದೇಶಕ್ಕೆ ಕರೆತರಲಾಗುತ್ತಿದೆ. ಐದು ವಿಮಾನಗಳು ಭಾನುವಾರ ದೆಹಲಿಗೆ ಬಂದಿಳಿದಿವೆ. ಅವುಗಳಲ್ಲಿ ಕರ್ನಾಟಕದ 72 ಮಂದಿ ಬಂದಿದ್ದಾರೆ. ಒಂದು ವಿಮಾನ ಮುಂಬೈಗೆ ಬಂದಿದ್ದು, ಅದರಲ್ಲಿ ರಾಜ್ಯದ ನಾಲ್ವರು ವಾಪಸಾಗಿದ್ದಾರೆ ಎಂದು ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ಜನರ ರಕ್ಷಣಾ ಕಾರ್ಯಾಚರಣೆಯ ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.
ಫೆಬ್ರುವರಿ 27ರಿಂದ ಭಾರತೀಯರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿತ್ತು. ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ಹೊತ್ತ 40 ವಿಮಾನಗಳು ದೆಹಲಿಗೆ ಮತ್ತು ಏಳು ವಿಮಾನಗಳು ಮುಂಬೈಗೆ ಬಂದಿಳಿದಿವೆ. ಅವುಗಳಲ್ಲಿ ಕರ್ನಾಟಕದ 448 ಮಂದಿ ಬಂದಿದ್ದು, ಎಲ್ಲರನ್ನೂ ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.