ADVERTISEMENT

ಪಂಚಮಸಾಲಿ ಸಮಾಜ ನೀವೊಬ್ಬರೇ ಕಟ್ಟಿಲ್ಲ: ಅಭಿನವ ಸಂಗನಬಸವ ಸ್ವಾಮೀಜಿ

ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 20:22 IST
Last Updated 6 ಫೆಬ್ರುವರಿ 2022, 20:22 IST
   

ಬಾಗಲಕೋಟೆ: ‘ಕೂಡಲಸಂಗಮ ಶ್ರೀಗಳು ಒಬ್ಬರೇ ಸಮಾಜ ಕಟ್ಟಿಲ್ಲ, ಅವರಿಗೂ ಮೊದಲು ಹರಿಹರದ ಮಹಾಂತ ಸ್ವಾಮೀಜಿ ಸಮಾಜ ಒಗ್ಗೂಡಿಸಿದ್ದಾರೆ’ ಎಂದು ಪಂಚಮಸಾಲಿ ಮಠಾಧೀಶರ ಒಕ್ಕೂಟದ ಕಾರ್ಯದರ್ಶಿ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮೂರನೇ ಪೀಠದ ಬಗ್ಗೆ ಮಾಡಿರುವ ಆರೋಪಕ್ಕೆ ಸಂಗನಬಸವ ಶ್ರೀಗಳು ತಿರುಗೇಟು ನೀಡಿದರು.

‘ಹರಿಹರ ಪೀಠವೇ ಸಮಾಜದ ಮೊದಲ ಪೀಠ, ಕೂಡಲಸಂಗಮ ಪೀಠವಲ್ಲ. 10 ಲಕ್ಷ ಜನರನ್ನು ಸೇರಿಸಿ ಪೀಠ ಸ್ಥಾಪಿಸಲಾಗಿದೆ. ಸಮಾಜದ ಜನರು ಮುಗ್ಧರಿದ್ದಾರೆ ಎಂದು ಏನು ಹೇಳಿದರೂ ನಂಬುತ್ತಾರೆ ಎಂದು ತಿಳಿದುಕೊಳ್ಳಬೇಡಿ.ಗುರು ಪರಂಪರೆಯ ಸ್ವಾಮೀಜಿಗಳು ಸೇರಿದಂತೆ ಅನೇಕ ಸ್ವಾಮೀಜಿಗಳು ಸಮಾಜ ಕಟ್ಟಿದ್ದಾರೆ. ನೀವು ಒಂದೇ ಸಮಾಜ ಕಟ್ಟಿರ
ಬೇಕು, ನಾವು ಬೇರೆ ಸಮಾಜದವರನ್ನು ಕಟ್ಟಿಕೊಂಡು ಸಮಾಜ ಬೆಳೆಸುತ್ತಿದ್ದೇವೆ’ ಎಂದರು.

ADVERTISEMENT

‘2 ಎ ಮೀಸಲಾತಿ ಹೋರಾಟ ನೀವೊಬ್ಬರೇ ಮಾಡಿದ್ದೀರಾ? ಮನಗೂಳಿ ಸ್ವಾಮೀಜಿ ಸಮಾಜದ ಜನರನ್ನು ಕರೆತಂದು ದುಡ್ಡು ಕೊಟ್ಟಿದ್ದಾರೆ. ಬಾಗೇವಾಡಿ, ಬಾಗಲಕೋಟೆ ಜನ ದುಡ್ಡು ನೀಡಿದ್ದಾರೆ. ನೀವು ಕೈಗೊಂಡ ಪಾದಯಾತ್ರೆಯಲ್ಲಿ ನಾವೂ ಭಾಗವಹಿಸಿದ್ದೇವೆ. ಯಾರು ಸಮಾಜ ಒಡೆಯುತ್ತಿದ್ದಾರೆ ಎಂಬುದಕ್ಕೆ ಜನರೇ ಉತ್ತರಿಸುತ್ತಾರೆ. 80 ಸಾವಿರದಿಂದ 1 ಲಕ್ಷ ಜನರನ್ನು ಸೇರಿಸಿ ಪೀಠಾರೋಹಣ ಸಮಾರಂಭ ನಡೆಸುತ್ತೇವೆ, ನಿಮ್ಮನ್ನೂ ಆಹ್ವಾನಿಸುತ್ತೇವೆ. ಬರುವುದು ಬಿಡುವುದು ನಿಮಗೆ ಬಿಟ್ಟ ವಿಚಾರ’ ಎಂದರು.

‘ಪಂಚಮಸಾಲಿ ಸಮಾಜದ ಮೂರನೇ ಪೀಠ ಮುಂದಿನ ದಿನಗಳಲ್ಲಿ ಮೂರಾಬಟ್ಟೆ ಆಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಗೆ, ‘ಮುಂದಿನ 10 ವರ್ಷಗಳ ನಂತರ ಉತ್ತರ ಸಿಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.