ADVERTISEMENT

ಸಾರಡ್ಕ ಚೆಕ್‌ಪೋಸ್ಟ್‌ ಸಂಚಾರಕ್ಕೆ ಮುಕ್ತ: ಸರ್ಕಾರ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 4:50 IST
Last Updated 19 ಆಗಸ್ಟ್ 2020, 4:50 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ‘ಕರ್ನಾಟಕ ಮತ್ತು ಕೇರಳ ಗಡಿ ಭಾಗದ ಸಾರಡ್ಕ ಚೆಕ್‌ಪೋಸ್ಟ್‌ನಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ನೀಡಿ ಆ.15ರಂದು ಆದೇಶ ಹೊರಡಿಸಲಾಗಿದೆ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ರಾಧಾಕೃಷ್ಣ ನಾಯಕ್ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ‘ದಿನಸಿ, ಕೃಷಿ ಚಟುವಟಿಕೆ, ವೈದ್ಯಕೀಯ ಸೌಲಭ್ಯಕ್ಕೆ ಮೂರು ಗ್ರಾಮಗಳ ಜನರು 15 ಕಿಲೋ ಮೀಟರ್ ದೂರದಲ್ಲಿರುವ ಪೆರ್ಲ ಪಟ್ಟಣವನ್ನೇ ಆಶ್ರಯಿಸಿದ್ದಾರೆ. ‌ಪೆರ್ಲ ಪಟ್ಟಣಕ್ಕೆ ಹೋಗಬೇಕೆಂದರೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಸಾರಡ್ಕಪೊಲೀಸ್ ಚೆಕ್‌ ಪೋಸ್ಟ್‌ ದಾಟಲೇಬೇಕು. ಕೋವಿಡ್ ಕಾರಣಕ್ಕೆ ಚೆಕ್‌ ಪೋಸ್ಟ್‌ನಲ್ಲಿ ಜನರು ಮತ್ತು ವಾಹನಗಳ ಸಂಚಾರ ಬಂದ್ ಮಾಡಲಾಗಿದೆ’ ಎಂದು ದೂರಿದ್ದರು.

‘ಆಗಸ್ಟ್ 15ರಿಂದ ನಿರ್ಬಂಧ ಸಡಿಲಿಸಲಾಗಿದೆ. ಪ್ರತಿದಿನ ಸಂಚರಿಸುವ ಪ್ರಯಾಣಿಕರು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ತಿಂಗಳ ಪಾಸ್ ಪಡೆಯಬೇಕು. ಚೆಕ್ ಪೋಸ್ಟ್‌ನಲ್ಲಿ ನೋಂದಾಯಿಸಿಕೊಳ್ಳಬೇಕು, ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ರಾಜ್ಯಕ್ಕೆಹಿಂತಿರುಗಲು ಬಯಸುವ ಪ್ರಯಾಣಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ನೋಂದಣಿ ಮಾಡಿಕೊಂಡು ತಲಪಾಡಿ ಅಥವಾ ಜಲ್ಸೂರ್ ಚೆಕ್‌ಪೋಸ್ಟ್‌ಗಳ ಮೂಲಕ ಪ್ರಯಾಣಿಸಬೇಕ’ ಎಂಬ ಷರತ್ತು ವಿಧಿಸಲಾಗಿದೆ’ ಎಂದು ವಿವರಿಸಿದೆ.

ADVERTISEMENT

ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂಬುದಕ್ಕೆ ಸಮರ್ಥನೆ ನೀಡುವಂತೆ ಪೀಠ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.