ADVERTISEMENT

ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಬಿಡುಗಡೆ; ಆಸ್ಪತ್ರೆ ಸುತ್ತ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 15:28 IST
Last Updated 30 ಜನವರಿ 2021, 15:28 IST
ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ನಟರಾಜನ್
ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ನಟರಾಜನ್   

ಬೆಂಗಳೂರು: ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ನಟರಾಜನ್‌, ನಗರದ ವಿಕ್ಟೋರಿಯಾ ಆಸ್ಪತ್ರೆಯಿಂದ ಭಾನುವಾರ ಬಿಡುಗಡೆ ಆಗಲಿದ್ದು, ಆಸ್ಪತ್ರೆ ಸುತ್ತ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ಶಶಿಕಲಾ ಬರಮಾಡಿಕೊಳ್ಳಲು ತಮಿಳುನಾಡಿನಿಂದ 5000ಕ್ಕೂ ಹೆಚ್ಚು ಜನರು ಬೆಂಗಳೂರಿಗೆ ಬರುವ ಸಾಧ್ಯತೆ ಇದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಜೈಲು ಶಿಕ್ಷೆ ಘೋಷಣೆಯಾದ ದಿನದಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಶಶಿಕಲಾ ಕರೆತರುವ ವೇಳೆ ಗಲಾಟೆ ಉಂಟಾಗಿತ್ತು. ಕೆಲ ವಾಹನಗಳಿಗೂ ಹಾನಿ ಆಗಿತ್ತು. ಅದೇ ಕಾರಣಕ್ಕೆ ಇದೀಗ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ADVERTISEMENT

ಸಂಬಂಧಿಕರು ಹಾಗೂ ಆತ್ಮೀಯರನ್ನು ಹೊರತುಪಡಿಸಿ ಉಳಿದ ಜನರನ್ನು ಆಸ್ಪತ್ರೆ ಬಳಿ ಕರೆಸದಂತೆ ಶಶಿಕಲಾ ಹಾಗೂ ಇತರರಿಗೆ ಪೊಲೀಸರಿಗೆ ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಜೈಲಿನಿಂದ ಬಿಡುಗಡೆ ಆಗಿರುವ ಶಶಿಕಲಾ, ಇದೀಗ ಕೋವಿಡ್‌ಗೂ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆಸ್ಪತ್ರೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಭಾನುವಾರ ಬೆಳಿಗ್ಗೆ ಅಥವಾ ಮಧ್ಯಾಹ್ನ ಶಶಿಕಲಾ ಬಿಡುಗಡೆ ಆಗುವ ಸಾಧ್ಯತೆ ಇದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆಸ್ಪತ್ರೆಯಿಂದ ಹೊರಬಂದ ಕೂಡಲೇ ತಮ್ಮದೇ ವಾಹನದಲ್ಲಿ ಶಶಿಕಲಾ ತೆರಳಲಿದ್ದಾರೆ. ಸ್ಥಳದಲ್ಲಿ ಮೆರವಣಿಗೆ ಹಾಗೂ ಸಂಭ್ರಮ ಆಚರಣೆಗೆ ಯಾವುದೇ ಅನುಮತಿ ನೀಡಿಲ್ಲ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.