ಬೆಂಗಳೂರು: ಪ್ರತಿ ವಿದ್ಯಾರ್ಥಿಯೂ ಸಸಿ ನೆಟ್ಟು ಬೆಳೆಸಲು, ಎಲ್ಲ ವಿದ್ಯಾರ್ಥಿಗಳಲ್ಲೂ ಪ್ರಕೃತಿ, ಪರಿಸರದ ಪ್ರೀತಿ ಮೂಡಿಸಲು 6ರಿಂದ 12ನೇ ತರಗತಿಯವರೆಗಿನ ಪಾಠಗಳಲ್ಲಿ ಪರಿಸರದ ವಿಷಯ ಅಳವಡಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.
ಚಾಮರಾಜಪೇಟೆ ಬಳಿಯ ಹಳೆಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಜತೆ ಗಿಡ ನೆಡುವ ಮೂಲಕ ಬಜೆಟ್ನಲ್ಲಿ ಘೋಷಿಸಿದ್ದ ‘ಸಸ್ಯ ಶ್ಯಾಮಲಾ’ ಯೋಜನೆಗೆ ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ತಲಾ 100, ಇತರೆ ಸರ್ಕಾರಿ ಶಾಲೆಗಳಿಗೆ ತಲಾ 50 ಸಸಿಗಳನ್ನು ನೀಡಲು ತೀರ್ಮಾನಿಸಲಾಗಿದೆ. ಮಕ್ಕಳೇ ಸಸಿ ನೆಡಲಿದ್ದಾರೆ. ಸಸಿಗಳಿಗೆ ಅವರ ಹೆಸರನ್ನೇ ಇಡಲಾಗುವುದು. ನೆಟ್ಟ ಸಸಿಯ ಪೋಷಣೆಯ ಹೊಣೆ ಆ ಮಕ್ಕಳಿಗೇ ವಹಿಸಲಾಗುವುದು. ಪ್ರಸಕ್ತ ವರ್ಷ ಐದು ಕೋಟಿ ಸಸಿ ನೆಡಲು ತೀರ್ಮಾನಿಸಿದ್ದು, ಜುಲೈ 1ರಿಂದ ಇಲ್ಲಿಯವರೆಗೆ ನಾಲ್ಕು ಕೋಟಿ ಸಸಿ ನೆಡಲಾಗಿದೆ ಎಂದರು.
ಮಧು ಬಂಗಾರಪ್ಪ ಮಾತನಾಡಿ, ಅರಣ್ಯ ಇಲಾಖೆ 50 ಲಕ್ಷ ಸಸಿಗಳನ್ನು ನೀಡಿದೆ, ಇನ್ನೂ 10 ಲಕ್ಷ ಸಸಿಗಳನ್ನು ಪೂರೈಸಬೇಕು ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.