ಮಂಗಳೂರು: ಕೋವಿಡ್-19 ನಿಯಂತ್ರಣಕ್ಕಾಗಿ ಸೌದಿ ಅರೇಬಿಯಾ ಎಲ್ಲ ಅಂತರರಾಷ್ಟ್ರೀಯ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಸೌದಿ ಅರೇಬಿಯಾಕ್ಕೆ ತೆರಳಲು ದುಬೈಗೆ ಬಂದಿರುವ ಸಾವಿರಾರು ಕನ್ನಡಿಗರು ಅತಂತ್ರರಾಗಿದ್ದಾರೆ. ಕರ್ನಾಟಕ ಸರ್ಕಾರ ಕೂಡಲೇ ನೆರವಿಗೆ ಮುಂದಾಗಬೇಕು ಎಂದು ಕರ್ನಾಟಕ ಕಲ್ಚರಲ್ ಫೋರಂನ (ಕೆಸಿಎಫ್) ಯುಎಇ ಸಮಿತಿ ಒತ್ತಾಯಿಸಿದೆ.
ಸೌದಿ ಅರೇಬಿಯಾ ತಲುಪಬೇಕಾದ ಉದ್ಯಮಿಗಳು, ನೌಕರರು ದುಬೈಗೆ ತೆರಳಿ, ಅಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿಗೆ ತೆರಳುತ್ತಿದ್ದರು. ಕ್ವಾರಂಟೈನ್ ವ್ಯವಸ್ಥೆಯೊಂದಿಗೆ ದುಬೈ ತಲುಪಿರುವ ಕನ್ನಡಿಗರು, ಅನಿರೀಕ್ಷಿತ ನಿರ್ಬಂಧದಿಂದಾಗಿ ಇದೀಗ ಸರಿಯಾದ ಊಟ, ಆಹಾರ, ವಸತಿ ವ್ಯವಸ್ಥೆಯಿಲ್ಲದೆ ಕಂಗಾಲಾಗಿದ್ದಾರೆ. ಈ ನಡುವೆ ವಿಸಿಟ್ ವೀಸಾ ಅವಧಿ ಮುಗಿದರೆ ದಂಡ ಕಟ್ಟಲು ಹಣವಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ಎದುರಾಗಬಹುದೆಂಬ ಭೀತಿಯೂ ಅವರನ್ನು ಕಾಡುತ್ತಿದೆ. ಕೂಡಲೇ ವಿದೇಶಾಂಗ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೆಸಿಎಫ್ ಯುಎಇ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.