ADVERTISEMENT

ಟ್ವಿಟರ್‌ನಲ್ಲಿ ಟ್ರೆಂಡ್‌ ಆದ #ಕನ್ನಡವಿವಿಉಳಿಸಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 8:04 IST
Last Updated 19 ಡಿಸೆಂಬರ್ 2020, 8:04 IST
   

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಸರ್ಕಾರ ನೆರವಿಗೆ ಆಗಮಿಸಬೇಕಿದೆ. ಈ ಕುರಿತಂತೆ #ಕನ್ನಡವಿವಿಉಳಿಸಿ ಹ್ಯಾಶ್ ಟ್ಯಾಗ್ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಈ ವಿಷಯದ ಕುರಿತಂತೆ ಪ್ರಜಾವಾಣಿ ಸಹ ವರದಿ ಮಾಡಿತ್ತು. ವಿಶ್ವವಿದ್ಯಾಲಯಕ್ಕೆ ಪ್ರತಿವರ್ಷ ಸರಾಸರಿ ₹5 ಕೋಟಿ ಅಭಿವೃದ್ಧಿ ಅನುದಾನ ಬರುತ್ತದೆ. ಆದರೆ, ಅದು ಅಲ್ಲಿನ ಸಿಬ್ಬಂದಿಯ ವೇತನ ಪಾವತಿಗಷ್ಟೇ ಸೀಮಿತವಾಗಿದೆ. ಅನ್ಯ ಕಾರ್ಯಕ್ರಮ, ಯೋಜನೆ ಹಮ್ಮಿಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ವಿಶ್ವವಿದ್ಯಾಲಯದ ಅಭಿವೃದ್ಧಿಯ ಅನುದಾನದಲ್ಲೂ ಸರ್ಕಾರ ಭಾರಿ ಕಡಿತ ಮಾಡುತ್ತ ಬಂದಿದೆ. ಸತತ ಎರಡು ವರ್ಷ ನೆರೆಯಿಂದ ರಾಜ್ಯದಲ್ಲಿ ಅಪಾರ ನಷ್ಟ ಉಂಟಾಗಿದೆ. ಈ ವರ್ಷ ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಈ ಕಾರಣಗಳನ್ನು ಕೊಟ್ಟು ಸರ್ಕಾರ ಅನುದಾನಕ್ಕೆ ಕತ್ತರಿ ಹಾಕಿದೆ.

2020–21ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ₹50 ಲಕ್ಷ ಅಭಿವೃದ್ಧಿ ಅನುದಾನ ಮಂಜೂರು ಆಗಿದೆ. ಈ ಪೈಕಿ ₹12.50 ಲಕ್ಷವಷ್ಟೇ ಬಿಡುಗಡೆಯಾಗಿದೆ. ಒಂದಿಲ್ಲೊಂದು ನೆಪವೊಡ್ಡಿ ಸರ್ಕಾರ ಅನುದಾನ ಕಡಿತ ಮಾಡುತ್ತಿರುವುದರಿಂದ ವಿಶ್ವವಿದ್ಯಾಲಯ ವರ್ಷದಿಂದ ವರ್ಷಕ್ಕೆ ಆರ್ಥಿಕ ಸಮಸ್ಯೆಗೆ ಒಳಗಾಗುತ್ತಿದೆ ಎಂದು ಆಡಳಿತ ಆರೋಪಿಸಿತ್ತು.

ADVERTISEMENT

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು #ಕನ್ನಡವಿವಿಉಳಿಸಿ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಅಭಿಯಾನದ ಬಗ್ಗೆ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹಂಪಿಯ ಕನ್ನಡ ವಿಶ್ವ ವಿದ್ಯಾಲಯಕ್ಕೆ ಅನುದಾನ ಕೊಡಲೇ ಬೇಕು. #ಕನ್ನಡವಿವಿಉಳಿಸಿ #ಬೆಳಗಾವಿ_ರಾಯಣ್ಣ pic.twitter.com/qPIPrqBHV9

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.