ನವದೆಹಲಿ: ತ್ವರಿತವಾಗಿ ವಿಶ್ವಾಸಮತ ನಿರ್ಣಯ ಕೈಗೊಳ್ಳಲು ಸ್ಪೀಕರ್ಗೆ ನಿರ್ದೇಶನ ನೀಡುವಂತೆ ಕೋರಿ ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಗಾಗಿ ಹಿರಿಯ ವಕೀಲರು ಹಾಜ
ರಾಗದ್ದರಿಂದ ಬುಧವಾರ ಯಾವುದೇ ಆದೇಶ ಹೊರಡಿಸದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಿದೆ.
ವಿಶ್ವಾಸಮತ ಪ್ರಕ್ರಿಯೆ ನಡೆಸುವ ಕುರಿತು ಸ್ಪೀಕರ್ ಆಶಾಭಾವ ವ್ಯಕ್ತಪಡಿಸಿದ್ದರಿಂದ ಮಂಗಳವಾರ ಈ ಕುರಿತು ಯಾವುದೇ ಆದೇಶ ನೀಡದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತ್ತು. ಆದರೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳವಾರ ಸಂಜೆ ವಿಶ್ವಾಸಮತ ಯಾಚಿಸಿದ್ದರಿಂದ ಅರ್ಜಿಯ ಉದ್ದೇಶ ಈಡೇರಿದಂತಾಗಿದೆ ಎಂದೇ ಭಾವಿಸಿ ಅರ್ಜಿದಾರರ ಪರ ವಕೀಲರು ಹಾಜರಾಗಲಿಲ್ಲ.ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಕೋರ್ಟ್ ಹಾಲ್ಗೆ ಬಂದರಾದರೂ ರೋಹಟ್ಗಿ ಅವರು ಇಲ್ಲದ್ದನ್ನು ಕಂಡು ವಾಪಸಾದರು. ಮುಖ್ಯಮಂತ್ರಿ ಪರ ವಕೀಲ ರಾಜೀವ್ ಧವನ್ ಹಾಜರಿದ್ದರು.
ಬುಧವಾರದ ವಿಚಾರಣೆ ಆರಂಭ ಆಗುತ್ತಿದ್ದಂತೆಯೇ ‘ರೋಹಟ್ಗಿ, ಸಿಂಘ್ವಿ ಹಾಗೂ ಕಪಿಲ್ ಸಿಬಲ್ ಅವರು ಎಲ್ಲಿ’ ಎಂದು ನ್ಯಾಯಮೂರ್ತಿ ಗೊಗೊಯಿ ಪ್ರಶ್ನಿಸಿದರು. ರೋಹಟ್ಗಿ ಅವರು ದೆಹಲಿಯಲ್ಲಿಲ್ಲ. ಹಾಗಾಗಿ ಅವರು ಹಾಜರಾಗಲು ಸಾಧ್ಯವಿಲ್ಲ ಎಂದು ಕಿರಿಯ ವಕೀಲೆ ದೀಕ್ಷಾ ರೈ ನ್ಯಾಯಪೀಠಕ್ಕೆ ವಿವರಿಸಿದರು.
ಕಾಮತ್ ರಾಜೀನಾಮೆ: ರಾಜ್ಯ ಸರ್ಕಾರ ನೇಮಿಸಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ದೇವದತ್ತ ಕಾಮತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.