ಬೆಂಗಳೂರು: ರಾಜ್ಯದಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪಠ್ಯಪುಸ್ತಕಗಳನ್ನು ವಿತರಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ಹಲವು ಶಾಲೆಗಳಿಗೆ ಇನ್ನೂ ಪುಸ್ತಕಗಳು ತಲುಪಿಯೇ ಇಲ್ಲ!
‘10ನೇ ತರಗತಿಯ ಸಮಾಜ ವಿಜ್ಞಾನ, ಇಂಗ್ಲಿಷ್ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ ಪುಸ್ತಕ, 6ನೇ ತರಗತಿಯ ಇಂಗ್ಲಿಷ್ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ, 4ನೇ ತರಗತಿಯ ಗಣಿತ ಭಾಗ 2, 6ನೇ ತರಗತಿಯ ಪರಿಸರ ವಿಜ್ಞಾನ ಪುಸ್ತಕಗಳು ಬೆಂಗಳೂರಿನಂತಹ ನಗರಗಳಲ್ಲೇ ಇನ್ನೂ ಸಿಕ್ಕಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ತಿಳಿಸಿದರು.
ಈಚೆಗೆ ಮುಖ್ಯಮಂತ್ರಿ ಅವರ ಸಭೆಯಲ್ಲಿ ಶಿಕ್ಷಣ ಇಲಾಖೆ ಸಲ್ಲಿಸಿದ ಮಾಹಿತಿಯಂತೆ, ರಾಜ್ಯದೆಲ್ಲೆಡೆ ಶೇ 100ರಷ್ಟು ಪಠ್ಯಪುಸ್ತಕ ವಿತರಣೆ ಮಾಡಿ ಮುಗಿದಿದೆ ಎಂದು ತಿಳಿಸಲಾಗಿತ್ತು.
‘ಇದು ದೊಡ್ಡ ಸುಳ್ಳು. ನಮಗೆ ಹಲವೆಡೆಯಿಂದ ಈಗಲೂ ದೂರವಾಣಿ ಕರೆಗಳು ಬರುತ್ತಲೇ ಇವೆ. ಮುಖ್ಯಮಂತ್ರಿ ಅವರಿಗೇ ಸುಳ್ಳು ಮಾಹಿತಿ ನೀಡಿದ ಬಳಿಕ, ಬಾರದ ಪಠ್ಯವನ್ನು ವಿತರಿಸುವ ಹೊಣೆಗಾರಿಕೆಯನ್ನು ಯಾರು ಹೊತ್ತುಕೊಳ್ಳುತ್ತಾರೆ?’ ಎಂದು ಶಶಿಕುಮಾರ್ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.