ADVERTISEMENT

ದಾವಣಗೆರೆ: ಸೌಹಾರ್ದಕ್ಕೆ ಸಾಕ್ಷಿಯಾದ ಸೀಮಂತ

ಹೋರಾಟಗಾರ್ತಿ ಪವಿತ್ರಾಗೆ ನಸೀಮಾಬಾನು ಮನೆಯಲ್ಲಿ ಉಡಿತುಂಬುವ ಕಾರ್ಯಕ್ರಮ

ಬಾಲಕೃಷ್ಣ ಪಿ.ಎಚ್‌
Published 25 ಜುಲೈ 2021, 3:06 IST
Last Updated 25 ಜುಲೈ 2021, 3:06 IST
ಪವಿತ್ರಾ ಅವರಿಗೆ ಸೀರೆ ನೀಡಿದ ನಸೀಮಾಬಾನು–ಅನೀಸ್‌ ಪಾಷ ದಂಪತಿ
ಪವಿತ್ರಾ ಅವರಿಗೆ ಸೀರೆ ನೀಡಿದ ನಸೀಮಾಬಾನು–ಅನೀಸ್‌ ಪಾಷ ದಂಪತಿ   

ದಾವಣಗೆರೆ: ಧರ್ಮಗಳ ನಡುವೆ ಬಾಂಧವ್ಯದ ಅಂತರಗಳು ಜಾಸ್ತಿಯಾಗುತ್ತಿರುವ ಸಮಯದಲ್ಲಿ ದಾವಣಗೆರೆಯಲ್ಲಿ ಸೌಹಾರ್ದಕ್ಕೆ ಸಾಕ್ಷಿಯಾಗುವಂಥ ಸೀಮಂತ ನಡೆದಿದೆ. ಮುಸ್ಲಿಂ ಮನೆಯಲ್ಲಿ ಹಿಂದೂ ಯುವತಿಗೆ ಉಡಿತುಂಬುವ ಕಾರ್ಯವಾಗಿದೆ.

ಕೈಗೆ ಬಳೆ ತೊಡಿಸಿ, ತಲೆಗೆ ಹೂವು ಮುಡಿಸಿ, ಉಡುಗೆ ನೀಡಿ, ಹಣ್ಣು–ಹಂಪಲು, ಸಿಹಿತಿನಿಸು ಬಡಿಸಿ ಸೀಮಂತ ಮಾಡಲಾಯಿತು. ಬಳಿಕ ಸಹಭೋಜನ ನಡೆಸಲಾಯಿತು.

ಮಂಡ್ಯದ ಪವಿತ್ರಾ ಎಂಬ ಯುವತಿ ಹೋರಾಟದ ಸಂಗಾತಿಯೂ ಆಗಿರುವ ದಾವಣಗೆರೆ ಯುವಕ ಸತೀಶ್‌ ಅರವಿಂದ್‌ ಅವರನ್ನು ಮದುವೆಯಾಗಿದ್ದರು. ಪವಿತ್ರಾ ಈಗ ತುಂಬು ಗರ್ಭಿಣಿ. ಅವರನ್ನು ನಸೀಮಾ ಬಾನು ತಮ್ಮ ಮನೆಗೆ ಕರೆಸಿ ಸೀಮಂತ ಮಾಡಿ ಕಳುಹಿಸಿಕೊಡುವ ಮೂಲಕ ಸೌಹಾರ್ದಕ್ಕೆ ಸಾಕ್ಷಿಯಾದರು. ನಸೀಮಾಬಾನು ಅವರ ಪತಿ, ವಕೀಲ ಅನೀಸ್‌ ಪಾಷ ಇದಕ್ಕೆ ಬೆಂಬಲವಾಗಿ ನಿಂತರು.

ADVERTISEMENT

‘ಹೆಣ್ಣಿಗೆ ಇಂಥ ಸಮಯದಲ್ಲಿಯೇ ಎಲ್ಲರೂ ಜತೆಯಲ್ಲಿ ಇರಬೇಕು. ಪ್ರೀತಿ ತೋರಬೇಕು ಎಂದು ಅನಿಸುವುದು. ನನಗೂ ಅದೇ ರೀತಿ ಭಾವನೆಗಳಿವೆ. ನಸೀಮಾ–ಅನೀಸ್‌ ದಂಪತಿ ನನ್ನನ್ನು ನನ್ನ ಮನೆಗಿಂತ ಹೆಚ್ಚು ಪ್ರೀತಿಸಿ ಕರೆಸಿ ಸೀಮಂತ ಮಾಡಿರುವುದು ಖುಷಿ ನೀಡಿದೆ’ ಎಂದು ಪವಿತ್ರಾ ‘ಪ್ರಜಾವಾಣಿ’ ಜತೆಗೆ ಅನಿಸಿಕೆ ಹಂಚಿಕೊಂಡರು.

‘ಪವಿತ್ರಾ ಮತ್ತು ಸತೀಶ್‌ ಅರವಿಂದ ದಂಪತಿ ಬಗ್ಗೆ ಮನೆಯವರು ಹೇಳುತ್ತಿದ್ದರು. ಹೋರಾಟದಲ್ಲಿ ತೊಡಗಿಸಿಕೊಂಡವರು ಮನೆಯಿಂದ ದೂರ ಇರುತ್ತಾರೆ. ಅವರಿಗೆ ನಾವೇ ಸಂಗಾತಿಗಳು, ಬಂಧುಗಳಾಗಬೇಕು. ಅದಕ್ಕೆ ಏನಾದರೂ ಮಾಡಬೇಕು ಎಂದು ಹೇಳಿದರು. ಪವಿತ್ರಾ ಅವರಿಗೆ ಸೀಮಂತ ಮಾಡಲು ನಿರ್ಧರಿಸಿದೆವು. ಸೀಮಂತದ ಪದ್ಧತಿ ಸರಿಯಾಗಿ ನಮಗ್ಯಾರಿಗೂ ಗೊತ್ತಿಲ್ಲ. ತಿಳಿದಷ್ಟು ಮಾಡಿದ್ದೇವೆ’ ಎಂದು ನಸೀಮಾಬಾನು ತಿಳಿಸಿದರು.

‘ಇದು ನಮ್ಮೊಳಗಿನ ಪ್ರೀತಿ. ಜತೆಗೆ ಭಾವೈಕ್ಯದ ಸಂಕೇತ. ಧರ್ಮ–ಧರ್ಮಗಳ ನಡುವೆ ದ್ವೇಷ ಕಡಿಮೆಯಾಗಬೇಕಿದ್ದರೆ ಧರ್ಮ ಮೀರಿ ಬಾಂಧವ್ಯ ಬೆಳೆಯಬೇಕು’ ಎಂಬುದು ಅನೀಸ್‌ ಪಾಷ ಅವರ ಅನಿಸಿಕೆ.

ಪವಿತ್ರಾ ಅವರು ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಜನಶಕ್ತಿ, ಮಹಿಳಾ ಮುನ್ನಡೆ ಮುಂತಾದ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ವಿದ್ಯಾರ್ಥಿ ಸಂಘಟನೆ, ಕೋಮು ಸೌಹಾರ್ದ ವೇದಿಕೆ, ಜನಶಕ್ತಿಯಲ್ಲಿ ತೊಡಗಿಸಿಕೊಂಡಿರುವ ಸತೀಶ್‌ ಅರವಿಂದ್‌ ಅವರನ್ನು ಪ್ರೀತಿಸಿ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾಖಾನಂ, ಕಾನೂನು ಸೇವಾ ‍ಪ್ರಾಧಿಕಾರದ ಎಲ್‌.ಎಚ್‌. ಅರುಣಕುಮಾರ್‌, ಸಮಾನತಾವಾದಿ ಚಿಂತಕ ಕತ್ತಲಗೆರೆ ತಿಪ್ಪಣ್ಣ, ಶುಭಾ, ಪ್ರಕಾಶ್‌, ಮುಸ್ತಫಾ ಅವರೂ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.