ನವದೆಹಲಿ: ‘ಸೆಮಿಕಂಡಕ್ಟರ್ ವಲಯ ಸ್ಥಾಪನೆಗೆ ಬೇಕಾದ ಎಲ್ಲ ಮೂಲಸೌಕರ್ಯ ಕರ್ನಾಟಕದಲ್ಲಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಗುಜರಾತ್ನಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಒತ್ತಡ ಹೇರುತ್ತಿದೆ. ಈ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಬೆಂಗಳೂರು ತಂತ್ರಜ್ಞಾನ ಶೃಂಗದ (ಬಿಟಿಎಸ್) 27ನೇ ಆವೃತ್ತಿ ನ. 19ರಿಂದ 21ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಬಿಟಿಎಸ್-25ಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ರೋಡ್ಶೋ ಮತ್ತು ಉದ್ಯಮಿಗಳೊಂದಿಗಿನ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸೆಮಿಕಂಡಕ್ಟರ್ ವಲಯಗಳ ಸ್ಥಾಪನೆಗೆ ಕರ್ನಾಟಕ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಆದರೆ, ಗುಜರಾತ್ಗೆ ನಾಲ್ಕು ಸೆಮಿಕಂಡಕ್ಟರ್ ವಲಯಗಳನ್ನು ಮಂಜೂರು ಮಾಡಲಾಗಿದೆ. ಅಲ್ಲಿ ಯಾವುದೇ ಮೂಲಸೌಕರ್ಯ ಇಲ್ಲ. ಮೋದಿ ಅವರು ದೇಶದ ಪ್ರಧಾನಿಯೋ ಅಥವಾ ಗುಜರಾತ್ನ ಮುಖ್ಯಮಂತ್ರಿಯೋ ಎಂಬ ಅನುಮಾನ ಕಾಡುತ್ತಿದೆ’ ಎಂದರು.
‘ಶೃಂಗಸಭೆಯಲ್ಲಿ 40ಕ್ಕೂ ಹೆಚ್ಚು ರಾಷ್ಟ್ರಗಳಿಂದ 50 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ವರ್ಷ ಜೈವಿಕ ತಂತ್ರಜ್ಞಾನ ಮತ್ತು ಆರೋಗ್ಯ ತಂತ್ರಜ್ಞಾನ, ಎಲೆಕ್ಟ್ರೋ ಮತ್ತು ಸೆಮಿಕಾನ್, ಟೆಲಿಕಾಂ, ವಿಜ್ಞಾನ–ತಂತ್ರಜ್ಞಾನ, ಸಾರಿಗೆ, ಹಸಿರು ತಂತ್ರಜ್ಞಾನ, ಬಿಎಫ್ಎಸ್ಐ, ಫಿನ್ಟೆಕ್, ಗೇಮಿಂಗ್ನಂತಹ ವಲಯಗಳಿಗೆ ವಿಶೇಷ ಒತ್ತು ನೀಡಲಾಗುತ್ತಿದೆ’ ಎಂದರು.
ಸಮಕಾಲೀನ ಉದ್ಯಮಗಳಿಗೆ ನಾವು ತೆರೆದುಕೊಂಡಿದ್ದು, ಇದಕ್ಕಾಗಿ ಜಗತ್ತಿನ ಪ್ರಮುಖ ಆವಿಷ್ಕಾರ ತಾಣಗಳೊಂದಿಗೆ ಜಾಗತಿಕ ಆವಿಷ್ಕಾರ ಸಹಭಾಗಿತ್ವ ಉಪಕ್ರಮದಡಿ ಒಪ್ಪಂದಗಳನ್ನು ಮಾಡಿಕೊಳ್ಳಲು ಉತ್ಸುಕವಾಗಿದ್ದೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.