ADVERTISEMENT

ಪ್ರತ್ಯೇಕ ಘಟನೆ: ಕೆರೆಯಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿಗಳ ಸಾವು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 18:24 IST
Last Updated 28 ಮಾರ್ಚ್ 2023, 18:24 IST
ಟಿ. ಗಿರೀಶ್
ಟಿ. ಗಿರೀಶ್   

ಹೊಳಲ್ಕೆರೆ (ಚಿತ್ರದುರ್ಗ ಜಿಲ್ಲೆ): ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಎರಡು ಪ್ರತ್ಯೇಕ ಘಟನೆಗಳು ಹೊಳಲ್ಕೆರೆಯಲ್ಲಿ ಮಂಗಳವಾರ ನಡೆದಿವೆ.

ತಾಲ್ಲೂಕಿನ ನಂದನಹೊಸೂರಿನ ಗುಂಡಿ ಕೆರೆಯಲ್ಲಿ ಈಜಲು ಹೋಗಿದ್ದ ಹೊರಕೆರೆ ದೇವರಪುರದ ಎಂ. ಸಂಜಯ್ (18), ನಂದನಹೊಸೂರು ಗೊಲ್ಲರಹಟ್ಟಿಯ ಟಿ. ಗಿರೀಶ್ (18) ಹಾಗೂ ಕಣಿವೆ ಜೋಗಿಹಳ್ಳಿಯ ಟಿ.ಎಸ್. ಮನೋಜ್ (19) ಮೃತ ವಿದ್ಯಾರ್ಥಿಗಳು.

ಈ ಮೂವರೂ ವಿದ್ಯಾರ್ಥಿಗಳು ಹೊರಕೆರೆ ದೇವರಪುರ ಗ್ರಾಮದಲ್ಲಿರುವ ಲಕ್ಷ್ಮೀ ನರಸಿಂಹ ಸ್ವಾಮಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯ ಕಲಾ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದರು.

ADVERTISEMENT

ಐದು ವಿಷಯಗಳ ಪರೀಕ್ಷೆ ಬರೆದಿದ್ದ ಇವರು, ಮಾರ್ಚ್ 29ರಂದು ಸಮಾಜಶಾಸ್ತ್ರ ವಿಷಯದ ಪರೀಕ್ಷೆ ಬರೆಯಬೇಕಿತ್ತು. ಮಧ್ಯಾಹ್ನ ಗುಂಡಿಕೆರೆಗೆ ಈಜಲು ಹೋಗಿದ್ದ ಮೂವರೂ ಸ್ನೇಹಿತರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇಬ್ಬರ ಶವಗಳನ್ನು ಸ್ಥಳೀಯರೇ ಹೊರತೆಗೆದಿದ್ದು, ಮತ್ತೊಬ್ಬ ಯುವಕನ ಶವವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದರು. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕ ಸಾವು: ಹೊಳಲ್ಕೆರೆಯ ಹೊನ್ನೆಕೆರೆಯಲ್ಲಿ ಈಜಲು ತೆರಳಿದ್ದ ಪಟ್ಟಣದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಬಿ.ಎನ್. ಶಶಾಂಕ್ (15) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಶಾಲೆಯಲ್ಲಿ ಮಂಗಳವಾರ ವಾರ್ಷಿಕ ಪರೀಕ್ಷೆ ಬರೆದು ಮಧ್ಯಾಹ್ನ ಮನೆಗೆ ಮರಳಿದ್ದ ಈ ಬಾಲಕ, ಈಜಲು ನಾಲ್ವರು ಸ್ನೇಹಿತರೊಂದಿಗೆ ಕೆರೆಗೆ ತೆರಳಿದ್ದ. ಈಜುವುದನ್ನು ಮೊಬೈಲ್‌ ಕ್ಯಾಮೆರಾದಲ್ಲಿ ಚಿತ್ರೀಕರಿಸುವಂತೆ ಗೆಳೆಯರಿಗೆ ತಿಳಿಸಿ ಮೇಲಿಂದ ಜಿಗಿದಿದ್ದ ಈತ ನಂತರ ಮೇಲೆ ಬರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಹೊಳಲ್ಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.