ಬೆಂಗಳೂರು: ‘ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಕೋರಂ ಕೊರತೆಯಿಂದ ಆರು ಸಾಮಾನ್ಯ ಸಭೆಗಳು ನಡೆದಿಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿರುವುದು ಗಮನದಲ್ಲಿ ಇದೆ. ಅಧಿವೇಶನ ಮುಗಿಯುತ್ತಿದ್ದಂತೆಯೇ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಅಧ್ಯಕ್ಷರು, ಸದಸ್ಯರ ಸಭೆ ನಡೆಸಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಿಧಾನಪರಿಷತ್ನಲ್ಲಿ ಹೇಳಿದರು.
2019ರ ಸೆಪ್ಟೆಂಬರ್ನಿಂದ ಸಾಮಾನ್ಯ ಸಭೆಗಳು ನಡೆಯದೆ ಕ್ರಿಯಾಯೋಜನೆಗೆ ಅನುಮೋದನೆ ದೊರೆಯುತ್ತಿಲ್ಲ. ಇದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ‘ಜೆಡಿಎಸ್ ಸದಸ್ಯರೇ ಸಭೆಗೆ ಹಾಜರಾಗುತ್ತಿಲ್ಲ. ಕೋರಂ ಕೊರತೆ ಇರುವುದರಿಂದ ಸಭೆಗಳು ನಡೆಯುತ್ತಿಲ್ಲ’ ಎಂದರು.
‘₹311 ಕೋಟಿ ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಬೇಕು. ಸಭೆ ನಡೆಯದಿದ್ದರೂ, ಪಂಚಾಯಿತಿ ಅಧ್ಯಕ್ಷರ ಒಬ್ಬರ ಪ್ರಸ್ತಾವಕ್ಕೆ ಅನುಮೋದನೆ ನೀಡಿರುವ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿದೆ. ಹೀಗೆ ಬಿಡುಗಡೆಯಾದ ಅನುದಾನದಲ್ಲಿ ಬಿಜೆಪಿ ಸದಸ್ಯರ ಕ್ಷೇತ್ರಗಳಿಗೇ ಹೆಚ್ಚು ಹಣ ನೀಡಲಾಗುತ್ತಿದೆ’ ಎಂದು ಮರಿತಿಬ್ಬೇಗೌಡ ದೂರಿದರು.
‘ಅಧ್ಯಕ್ಷರು ಜೆಡಿಎಸ್ ಪಕ್ಷದವರೇ. ಸಭೆಗೆ ಗೈರು ಹಾಜರಾಗುತ್ತಿರುವುದೂ ಜೆಡಿಎಸ್ ಸದಸ್ಯರು. ಪಕ್ಷದೊಳಗಿನ ಸಮಸ್ಯೆಗೆ ಸರ್ಕಾರ ಏನು ಮಾಡಬೇಕು’ ಎಂದು ಪ್ರತಿಕ್ರಿಯಿಸಿದ ಈಶ್ವರಪ್ಪ, ‘ಮಂಡ್ಯ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಶೀಘ್ರ ಸಭೆ ನಡೆಸುತ್ತೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.