ADVERTISEMENT

ಋತುಮತಿಯಾಗುವವರೆಗೆ ಮುರುಘಾ ಶರಣರಿಂದ ಅತ್ಯಾಚಾರ: ಸಂತ್ರಸ್ತ ಮಕ್ಕಳ ತಾಯಿ ದೂರು

ಮತ್ತೊಂದು ಎಫ್‌ಐಆರ್‌: ಶರಣ ಸೇರಿ ಏಳು ಆರೋಪಿಗಳು

ಕೆ.ನರಸಿಂಹ ಮೂರ್ತಿ
Published 14 ಅಕ್ಟೋಬರ್ 2022, 8:59 IST
Last Updated 14 ಅಕ್ಟೋಬರ್ 2022, 8:59 IST
   

ಮೈಸೂರು: ’ಚಿತ್ರದುರ್ಗದ ಮುರುಘಾ ಮಠದ ವಿದ್ಯಾರ್ಥಿನಿಲಯದಲ್ಲಿ ಓದುತ್ತಿದ್ದ ನನ್ನ ಇಬ್ಬರು ಹೆಣ್ಣುಮಕ್ಕಳು ಋತುಮತಿಯರಾಗುವವರೆಗೂ ಶಿವಮೂರ್ತಿ ಮುರುಘಾ ಶರಣರು ಸತತ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ‘ ಎಂದು ಸಂತ್ರಸ್ತ ಮಕ್ಕಳ ತಾಯಿ ಇಲ್ಲಿನ ನಜರಾಬಾದ್‌ ಠಾಣೆಯಲ್ಲಿ ದೂರು ನೀಡಿದ್ದು, ಶರಣರು ಸೇರಿ ಏಳು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ದೌರ್ಜನ್ಯ ನಡೆಸಲು ಶರಣರು, ಮಹಿಳಾ ವಾರ್ಡನ್‌ ಅವರಮೂಲಕ ತಮ್ಮ ಖಾಸಗಿ ಕೊಠಡಿಗೆ ಕರೆಸಿಕೊಳ್ಳುತ್ತಿದ್ದರು ಎಂಬ ದೂರಿನ ಮೇರೆಗೆ ಶರಣರನ್ನು ಮೊದಲ ಆರೋಪಿಯನ್ನಾಗಿಸಲಾಗಿದೆ. ನಂತರದ ಆರೋಪಿಗಳನ್ನಾಗಿ ಮಹಿಳಾವಾರ್ಡನ್‌, ಬಾಲಕ, ಮೈಸೂರಿನ ಭಕ್ತರಾದ ಪರಮಶಿವಯ್ಯ ಮತ್ತು ಗಂಗಾಧರಯ್ಯ, ಮುರುಘಾ ಮಠದ ಬಸವಲಿಂಗ ಮತ್ತು ಕರಿಬಸಪ್ಪ ಅವರನ್ನು ಹೆಸರಿಸಲಾಗಿದೆ.

’ತನ್ನ ಇಬ್ಬರು ಮಕ್ಕಳನ್ನಷ್ಟೇ ಅಲ್ಲದೆ, ಇನ್ನಿಬ್ಬರ ಮಕ್ಕಳ ಮೇಲೂ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ‘ ಎಂದು ಮಹಿಳೆಯು ದೂರಿದ್ದಾರೆ. ಹೀಗಾಗಿ 14 ವರ್ಷದ ಇಬ್ಬರು, 15 ವರ್ಷ ಹಾಗೂ 12 ವರ್ಷದ ಒಬ್ಬರು ಸೇರಿ ನಾಲ್ವರು ಬಾಲಕಿಯರನ್ನು ಸಂತ್ರಸ್ತರನ್ನಾಗಿ ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.

ADVERTISEMENT

ಮಹಿಳೆಯು ಮಠದಲ್ಲೇ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅತಿ ಬಡತನದ ಕಾರಣಕ್ಕೆ ತನ್ನ ಮಕ್ಕಳನ್ನೂ ಮಠದ ಶಾಲೆ ಹಾಗೂ ವಸತಿನಿಲಯಕ್ಕೆ ದಾಖಲಿಸಿದ್ದರು. ’ಮಧ್ಯಾಹ್ನದ ಊಟದ ವೇಳೆಯಲ್ಲಿ ಹಾಗೂ ವಸತಿ ನಿಲಯದ ಕಡೆಗೆ ತೆರಳಿದಾಗಷ್ಟೇ ತನ್ನ ಮಕ್ಕಳನ್ನು ನೋಡಲು ಅವಕಾಶ ಸಿಗುತ್ತಿತ್ತು‘ ಎಂದು ತಿಳಿಸಿದ್ದಾರೆ.

ಆರು ವರ್ಷದ ಹಿಂದೆ ಮಹಿಳೆಯು ತನ್ನ ಇಬ್ಬರು ಮಕ್ಕಳನ್ನು ಕ್ರಮವಾಗಿ 3ನೇ ಮತ್ತು 1ನೇ ತರಗತಿಗೆ ಸೇರಿಸಿದ್ದರು. ’ಒಬ್ಬ ಮಗಳನ್ನು 2019ರಲ್ಲಿ ಮತ್ತು ಇನ್ನೊಬ್ಬ ಮಗಳನ್ನು 2020ರ ಕೋವಿಡ್‌ ಅವಧಿಯಲ್ಲಿ ಶರಣರು ಮೊದಲಿಗೆ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಂಡಿದ್ದರು. ಋತುಮತಿಯರಾಗುವವರೆಗೂ ಶರಣರು ದೌರ್ಜನ್ಯ ಎಸಗಿದ್ದರು ಎಂದು ಮಕ್ಕಳು ತಿಳಿಸಿದ್ದಾರೆ‘ ಎಂದು ಮಹಿಳೆಯು ಆರೋಪಿಸಿದ್ದಾರೆ.

’ವಸತಿ ನಿಲಯದಲ್ಲಿದ್ದ 14 ಮತ್ತು 15 ವರ್ಷ ವಯಸ್ಸಿನ ಇನ್ನಿಬ್ಬರು ಬಾಲಕಿಯರು ಶರಣರಿಂದ ದೌರ್ಜನ್ಯಕ್ಕೆ ಒಳಗಾದ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ‘ ಎಂದೂ ಮಹಿಳೆಯರು ಆರೋಪಿಸಿದ್ದಾರೆ.

ಹೆದರಿಸುತ್ತಿದ್ದರು: ಮುರುಘಾ ಶರಣರ ಬಳಿಗೆ ಹೋಗಲು ನಿರಾಕರಿಸುವ ಮಕ್ಕಳನ್ನು ಮಠದ ಬಾಲಕ,ಪರಮಶಿವಯ್ಯ, ಗಂಗಾಧರಯ್ಯ ಹೆದರಿಸುತ್ತಿದ್ದರು. ಸ್ವಾಮೀಜಿಯ ಸಹಾಯಕ ಮಹಾಲಿಂಗ ಮತ್ತು ಅಡುಗೆಭಟ್ಟ ಕರಿಬಸಪ್ಪ ಅವರು ಶರಣರ ಖಾಸಗಿ ಕೊಠಡಿಗೆ ಕರೆದುಕೊಂಡು ಹೋಗಿಬಿಡುವುದು, ಕೊಠಡಿಗೆ ಬೇರೆ ಯಾರೂ ಹೋಗದಂತೆ ಕಾಯ್ದುಕೊಳ್ಳುತ್ತಿದ್ದುದನ್ನು ಪ್ರತ್ಯಕ್ಷವಾಗಿ ನೋಡಿದ್ದೇನೆ‘ ಎಂದು ಮಹಿಳೆಯು ಆರೋಪಿಸಿದ್ದಾರೆ.

’ಸ್ವಾಮೀಜಿ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದರಿಂದ, ನನ್ನ ಮಕ್ಕಳು ಹದಿಯರೆಯದವರಾಗಿದ್ದು, ಮಠದಲ್ಲೇ ನಾನು ಕೆಲಸ ಮಾಡುತ್ತಿದ್ದು, ಆರ್ಥಿಕವಾಗಿ ದುರ್ಬಲಳಾಗಿದ್ದುದರಿಂದ ಇದುವರೆಗೆ ದೂರು ನೀಡಿರಲಿಲ್ಲ. ಆದರೆ ಇಬ್ಬರು ಹೆಣ್ಣುಮಕ್ಕಳು ಮೈಸೂರಿನ ಒಡನಾಡಿ ಸಂಸ್ಥೆ ಮೂಲಕ ದೂರು ದಾಖಲಿಸಿದ್ದರಿಂದ ದೂರು ನೀಡಲು ಮುಂದಾದೆ‘ ಎಂದೂ ಹೇಳಿದ್ದಾರೆ.

ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ ಎಂದು‌ನಜರಾಬಾದ್‌ ಪೊಲೀಸರು ತಿಳಿಸಿದ್ದಾರೆ.

ಸಮಾಲೋಚನೆ: ಬಾಲಕಿಯ ತಾಯಿಯೊಂದಿಗೆ ಒಡನಾಡಿ ಸಂಸ್ಥೆಯು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಪ್ರಮುಖರಾದ ಸುಶೀಲಮ್ಮ, ರತಿರಾವ್‌, ರಾಮೇಶ್ವರಿ ವರ್ಮ ಅವರೊಂದಿಗೆ ಆಪ್ತಸಮಾಲೋಚನೆ ನಡೆಸಿತ್ತು. ಸಕಲ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಲಾಯಿತು ಎಂದು ಸಂಸ್ಥೆಯ ಎಂ.ಎಲ್‌.ಪರಶುರಾಂ ’ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.