ಬೆಂಗಳೂರು: ಅಲ್ಪಸಂಖ್ಯಾತ ಸಮುದಾಯದ ಬಡ ಹೆಣ್ಣುಮಕ್ಕಳ ಮದುವೆಗೆ ನೆರವು ನೀಡಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ್ದ ‘ಶಾದಿಭಾಗ್ಯ’ಕ್ಕೆ (ಬಿದಾಯಿ ಯೋಜನೆ) ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅನುದಾನ ಕಡಿತ ಮಾಡಿದೆ.
ಇದೇ ಫೆಬ್ರುವರಿಯಲ್ಲಿ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ನಲ್ಲಿ ₹ 125 ಕೋಟಿ ಅನುದಾನ ಮೀಸಲಿಟ್ಟಿದ್ದರು. ಜುಲೈನಲ್ಲಿ ಮಂಡನೆಯಾಗಿರುವ ‘ದೋಸ್ತಿ’ ಬಜೆಟ್ನಲ್ಲಿ ₹ 55 ಕೋಟಿ ನೀಡಲಾಗಿದೆ.
‘23,592 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಹೊಸದಾಗಿ 10 ಸಾವಿರ ಅರ್ಜಿಗಳು ಸಲ್ಲಿಕೆಯಾಗುವ ಅಂದಾಜಿದ್ದು, ₹ 120 ಕೋಟಿ ನೀಡಬೇಕು ಎಂದು ಬಜೆಟ್ ಪೂರ್ವಭಾವಿ ಸಭೆಯಲ್ಲಿ ಹಣಕಾಸು ಸಚಿವರೂ ಆಗಿರುವ ಕುಮಾರಸ್ವಾಮಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು’ ಎಂದು ಅಲ್ಪಸಂಖ್ಯಾತ ಇಲಾಖೆ ಮೂಲಗಳು ತಿಳಿಸಿವೆ.
ಏನಿದು ಯೋಜನೆ: 2013ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಮುಸ್ಲಿಂ ಸಮುದಾಯದ ಬಡ ಹೆಣ್ಣುಮಕ್ಕಳ ವಿವಾಹಕ್ಕೆ ತಲಾ ₹50 ಸಾವಿರ ನೆರವು ನೀಡುವ ‘ಶಾದಿ ಭಾಗ್ಯ’ ಯೋಜನೆ ಆರಂಭಿಸಿದ್ದರು.
‘ಶಾದಿಭಾಗ್ಯ’ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತಿದ್ದ ಸರ್ಕಾರ, ಮುಸ್ಲಿಮ್, ಕ್ರಿಶ್ಚಿಯನ್, ಜೈನ್, ಬೌದ್ಧ ಮತ್ತು ಪಾರ್ಸಿ ಸಮುದಾಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಕ್ಕಳು, ವಿಧವೆಯರು, ವಿಚ್ಛೇದಿತರಿಗೂ ಈ ಯೋಜನೆಯನ್ನು ವಿಸ್ತರಿಸಿತ್ತು. ಈಗ ಅನುದಾನ ಕಡಿತ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.
ಅಂಕಿ ಅಂಶ
₹ 330 ಕೋಟಿ
2013ರಿಂದ 2018ರವರೆಗೆ ಮಾಡಿರುವ ವೆಚ್ಚ
₹125 ಕೋಟಿ
ಸಿದ್ದರಾಮಯ್ಯ ಹಂಚಿಕೆ ಮಾಡಿದ್ದ ಅನುದಾನ
₹55 ಕೋಟಿ
ಕುಮಾರಸ್ವಾಮಿ ಹಂಚಿಕೆ ಮಾಡಿರುವ ಅನುದಾನ
* ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲು ಹೆಚ್ಚು ಹಣ ಅಗತ್ಯ. ಸರ್ಕಾರ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇದೆ
-ಅಕ್ರಂ ಪಾಶಾ, ನಿರ್ದೇಶಕ, ಅಲ್ಪಸಂಖ್ಯಾತ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.