ADVERTISEMENT

ಬೆಳಗಾವಿ: ಶಾಮನೂರು ಶಿವಶಂಕರಪ್ಪಗೆ ಸಂತಾಪ- ಉಭಯ ಸದನಗಳ ಕಲಾಪ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 7:21 IST
Last Updated 15 ಡಿಸೆಂಬರ್ 2025, 7:21 IST
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ   

ಬೆಳಗಾವಿ (ಸುವರ್ಣ ವಿಧಾನಸೌಧ): ವಿಧಾನ ಮಂಡಲದ ಉಭಯ ಸದನಗಳಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸೋಮವಾರ ಸಂತಾಪ ಸೂಚಿಸಿ, ಎರಡೂ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ವಿಧಾನಸಭೆಯಲ್ಲಿ ಸಂತಾಪ ಸೂಚನೆ ನಿರ್ಣಯ ಮಂಡಿಸಿ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್, ‘ಎಷ್ಟೇ ಜಟಿಲವಾದ ಸಮಸ್ಯೆಯನ್ನೂ ತಾಳ್ಮೆಯಿಂದ ನಿಭಾಯಿಸುವ ಗುಣ ಶಾಮನೂರು ಅವರಲ್ಲಿತ್ತು. ಅವರ ಜೀವನವೇ ಒಂದು ಸಂದೇಶ’ ಎಂದು ಬಣ್ಣಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ದಾವಣಗೆರೆಯನ್ನು ವಿದ್ಯಾಕಾಶಿಯಾಗಿ ರೂಪಿಸುವ ಜೊತೆಗೆ, ಅಲ್ಲಿಗೆ ಬ್ರ್ಯಾಂಡ್‌ ಹೆಸರು ತಂದಕೊಟ್ಟವರು ಶಾಮನೂರು ಶಿವಶಂಕರಪ್ಪನವರು’ ಎಂದರು.

ವಿರೋಧ ಪಕ್ಷದ ನಾಯಕ ಆರ್‌, ಅಶೋಕ, ಸಚಿವರಾದ ಕೆ.ಎಚ್‌. ಮುನಿಯಪ್ಪ, ಜಮೀರ್‌ ಅಹಮದ್ ಖಾನ್, ಬಿಜೆಪಿ ಎಸ್‌. ಸುರೇಶ್‌ ಕುಮಾರ್, ಸಿದ್ದು ಸವದಿ, ಆರಗ ಜ್ಞಾನೇಂದ್ರ, ಸಿಮೆಂಟ್‌ ಮಂಜು, ಕಾಂಗ್ರೆಸ್‌ನ ಯು.ಬಿ. ಬಣಕಾರ, ಜಿ.ಟಿ. ಪಾಟೀಲ, ಶಿವಲಿಂಗೇಗೌಡ, ಅಪ್ಪಾಜಿ ನಾಡಗೌಡ ಮತ್ತಿತರರು ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.

ADVERTISEMENT

ವಿಧಾನ ಪರಿಷತ್‌ನಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಸಭಾನಾಯಕ ಎನ್‌.ಎಸ್. ಬೋಸರಾಜು, ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಚಿವರಾದ ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಬಿಜೆಪಿಯ ಪ್ರದೀಪ ಶೆಟ್ಟರ್‌, ಸಿ.ಟಿ. ರವಿ, ಎನ್‌. ರವಿಕುಮಾರ್, ಜೆಡಿಎಸ್‌ನ ಎಸ್‌.ಎಲ್‌. ಭೋಜರಾಜು ಮತ್ತಿತರರು ಶಾಮನೂರು ಶಿವಶಂಕರಪ್ಪ ಅವರಿಗೆ ಸಂತಾಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.