ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಚೇತರಿಕೆಗಾಗಿ ಗುರುವಾರ ರಾಜ್ಯದ ಹಲವೆಡೆ ಗ್ರಹಣ ಶಾಂತಿ ಹೋಮ ನಡೆಯಿತು.
ಎಡಗಾಲಿನ ಮೂಳೆಮುರಿತ ಸಮಸ್ಯೆಯಿಂದ ಬಳಲುತ್ತಿದ್ದರೂ ನಾಲ್ಕು ದಿನಗಳಿಂದ ಉಡುಪಿಯಲ್ಲಿ ತಂಗಿರುವ ಕೇಂದ್ರ ಮಾಜಿ ಸಚಿವೆ ಉಮಾ ಭಾರತಿಪ್ರವಾಸಿ ಮಂದಿರದಲ್ಲಿ ಉಪವಾಸ ನಿರತರಾಗಿ ಜಪ ಮಾಡಿದರು. ಗ್ರಹಣ ಮುಗಿದ ಬಳಿಕ ಕೃಷ್ಣನ ದರ್ಶನ ಮಾಡಿದರು.
ಕೃಷ್ಣಮಠದಲ್ಲಿ ಬೆಳಿಗ್ಗೆಧನ್ವಂತರಿ ಜಪ ಹಾಗೂ ವಿಷ್ಣು ಸಹಸ್ರ ನಾಮಾರ್ಚನೆ ಹಾಗೂ ಉಪರಾಗ ಶಾಂತಿ ನಡೆಯಿತು.ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು ಮಧ್ವ ಸರೋವರದಲ್ಲಿ ಮಿಂದು ಗ್ರಹಣ ಮುಗಿಯುವವರೆಗೂ ಜಪಾನುಷ್ಠಾನ ಮಾಡಿದರು. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸುತ್ತೂರು ಶ್ರೀಗಳು ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ಚೇತರಿಕೆಗೆ ಹಾರೈಸಿದರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ, ಮೈಸೂರಿನ ಕೃಷ್ಣಧಾಮ, ಚೆನ್ನೈ ಶ್ರೀನಗರದ ಕೃಷ್ಣ ಮಂದಿರ, ಬಾಗಲಕೋಟೆ, ರಾಮೇಶ್ಚರ, ತಿರುಮಲ ತಿರುಪತಿ, ಹುಬ್ಬಳ್ಳಿ, ಹಾಸನ, ಹರಿದ್ವಾರ, ದೆಹಲಿ ಸೇರಿದಂತೆ ಪೇಜಾವರ ಮಠದ ಶಾಖೆಗಳಲ್ಲಿ ವಿದ್ವಾಂಸರು, ಶಿಷ್ಯರು, ಭಕ್ತರು ಪ್ರಾರ್ಥನೆ ಸಲ್ಲಿಸಿದರು.
ಹುಬ್ಬಳ್ಳಿಯ ಅಶ್ವತ್ಥ ಲಕ್ಷ್ಮಿನರಸಿಂಹ ಸನ್ನಿಧಿಯಲ್ಲಿ ಗ್ರಹಣ ಶಾಂತಿ ಹೋಮ ಹಾಗೂ ಜಪ ಪಾರಾಯಣ ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.