ಕಾರವಾರ: ಇಲ್ಲಿನ ದೇವಗಡ ದ್ವೀಪದ (ಲೈಟ್ಹೌಸ್) ಸಮೀಪ ಅರಬ್ಬಿ ಸಮುದ್ರದಲ್ಲಿ ಹವಳ ಬೆಳೆಯುತ್ತಿದೆ. ಇಲ್ಲಿ ಮುಳುಗಿದ್ದ ಹಡಗಿನ ಅವಶೇಷಗಳ ಮೇಲೆ ಅವು ಪತ್ತೆಯಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ಸ್ ತಂಡದ ಸದಸ್ಯರು ಈಚೆಗೆ ಇಲ್ಲಿ ಸ್ಕೂಬಾ ಡೈವ್ ಮಾಡಿದ್ದರು. ಆಗ ಸುಮಾರು 15 ಮೀಟರ್ ಸಮುದ್ರದಾಳದಲ್ಲಿ ಹವಳ ಬೆಳೆದಿರುವುದನ್ನು ಗಮನಿಸಿ ಫೋಟೊ ತೆಗೆದುಕೊಂಡಿದ್ದರು. ಆ ಚಿತ್ರಗಳನ್ನು ಪರಿಶೀಲಿಸಿದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಾಗರ ಜೀವ ವಿಜ್ಞಾನ ಕೇಂದ್ರದ ಅಧ್ಯಕ್ಷಜಗನ್ನಾಥ ರಾಥೋಡ್, ಹವಳ ಬೆಳೆದಿರುವುದನ್ನು ದೃಢಪಡಿಸಿದ್ದಾರೆ.
‘ಇದು ಗಟ್ಟಿ ಹವಳವಾಗಿದ್ದು,ಕಾರವಾರ ಭಾಗದಲ್ಲಿ ಪತ್ತೆಯಾಗಿದ್ದು ಇದೇ ಮೊದಲು. ಹೊನ್ನಾವರ ತಾಲ್ಲೂಕಿನ ಮಂಕಿ ಸಮೀಪ ಸಮುದ್ರದಲ್ಲಿ ಮೆದು ಹವಳ ಈ ಹಿಂದೆ ಕಂಡುಬಂದಿತ್ತು. ಸಾಧಾರಣವಾಗಿ ಈ ಜೀವಿಗಳು ಮೂರರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಪೂರ್ಣವಾಗಿ ಬೆಳೆಯುತ್ತವೆ.ಅವುಗಳಜತೆಗೆ ಬೇರೆಬೇರೆ ರೀತಿಯ ಜೀವಿಗಳೂ ವಾಸ ಮಾಡುತ್ತವೆ. ಹಾಗಾಗಿ ಈ ಭಾಗದಲ್ಲಿ ಜೀವವೈವಿಧ್ಯ ಇರುವುದು ಖಚಿತವಾಗುತ್ತದೆ. ಇದನ್ನು ರಕ್ಷಿಸಲು ಮುಂದಾಗಬೇಕು’ ಎಂದು ಅವರು ಒತ್ತಾಯಿಸಿದರು.
ಮುಳುಗಿದ್ದು ಕಚ್ಚಾತೈಲ ಹಡಗು
2006ರ ಜೂನ್ನಲ್ಲಿ ಕಾರವಾರಕ್ಕೆ ಇರಾನ್ನಿಂದ ‘ಓಶಿಯನ್ ಸರಯ’ ಹೆಸರಿನ ಹಡಗು ಕಚ್ಚಾತೈಲ ತುಂಬಿಕೊಂಡು ಬಂದಿತ್ತು. ಹಡಗು ಬಂದರಿಗೆ ತಲುಪುವ ಮೊದಲೇ ಮಳೆಜೋರಾಗಿದ್ದರಿಂದ ದೇವಗಡ ದ್ವೀಪದ ಸಮೀಪಕ್ಕೆ ಬಂದು ರಾತ್ರಿ ಲಂಗರು ಹಾಕಿತ್ತು. ಆದರೆ ಲಂಗರು ಕಡಿದು ಹಡಗಿಗೆ ಬಡಿದಿದ್ದರಿಂದ ಉಂಟಾದ ಬಿರುಕಿನಿಂದ ಕಚ್ಚಾತೈಲ ಸೋರಿಕೆಯಾಗಿತ್ತು. 10 ದಿನಗಳ ಬಳಿಕ ಹಡಗು ಸಂಪೂರ್ಣವಾಗಿ ಮುಳುಗಿತ್ತು ಎಂದು ಜಗನ್ನಾಥ ರಾಥೋಡ್ ನೆನಪಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.