ತುಮಕೂರು: ‘ಶಿವಕುಮಾರ ಸ್ವಾಮೀಜಿ ಅವರ ರಕ್ತದ ಒತ್ತಡ ಶನಿವಾರ ಮಧ್ಯರಾತ್ರಿ ಏರುಪೇರಾಗಿತ್ತು. ಚಿಕಿತ್ಸೆ ನೀಡಿದ ಬಳಿಕ ಸ್ಥಿರವಾಗಿದೆ. ಶ್ವಾಸಕೋಶದಲ್ಲಿನ ಸೋಂಕು ಯಥಾಸ್ಥಿತಿಯಲ್ಲಿದೆ’ ಎಂದು ಸಿದ್ಧಗಂಗಾ ಆಸ್ಪತ್ರೆಯ ಮುಖ್ಯಸ್ಥ ಡಾ.ಪರಮೇಶ್ ತಿಳಿಸಿದರು.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶ್ವಾಸಕೋಶದ ಸೋಂಕು ಭಾನುವಾರದ ವೇಳೆಗೆ ಕಡಿಮೆ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಕಡಿಮೆ ಆಗಿಲ್ಲ. ಸತತ ಚಿಕಿತ್ಸೆ ನೀಡಲಾಗುತ್ತಿದೆ. ಚೆನ್ನೈನ ರೇಲಾ ಆಸ್ಪತ್ರೆಯ ಡಾ.ಸುಬ್ರಾ, ಬಿಜೆಎಸ್ ಆಸ್ಪತ್ರೆಯ ಡಾ.ರವೀಂದ್ರ ಅವರ ಸಲಹೆಯಂತೆ ರೋಗನಿರೋಧಕ ಔಷಧಿಯನ್ನು ಬದಲಾವಣೆ ಮಾಡಲಾಗಿದೆ’ ಎಂದರು.
‘ಸ್ವಾಮೀಜಿ ಅವರ ದೇಹದಲ್ಲಿ ಜೀವಸತ್ವ ಅಂಶದ ಪ್ರಮಾಣ 2.5ರಿಂದ 3ಕ್ಕೆ ಹೆಚ್ಚಾಗಿದೆ. ಇದು ಉತ್ತಮ ಬೆಳವಣಿಗೆ. ಶ್ವಾಸಕೋಶದಿಂದ ಎರಡು ದಿನಕ್ಕೊಮ್ಮೆ ನೀರು ಹೊರ ತೆಗೆಯಲಾಗುತ್ತಿದೆ. ಸ್ವಾಮೀಜಿ ಮಠಕ್ಕೆ ತೆರಳಲು ಅಪೇಕ್ಷಿಸುತ್ತಿದ್ದಾರೆ. ಸೋಂಕು ಪೂರ್ಣವಾಗಿ ನಿವಾರಣೆಯಾದ ಬಳಿಕ ಮಠಕ್ಕೆ ಹೋಗಬಹುದೆಂದು ಮನವರಿಕೆ ಮಾಡಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.