ADVERTISEMENT

ಭಗವಾಧ್ವಜದೊಂದಿಗೆ ರಾಜ್ಯ ಪ್ರವೇಶಿಸಲು ಶಿವಸೇನಾ ಯತ್ನ

ಗಡಿಯಲ್ಲಿ ಪೊಲೀಸರೊಂದಿಗೆ ವಾಗ್ವಾದ, ಜಟಾಪಟಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 18:28 IST
Last Updated 21 ಜನವರಿ 2021, 18:28 IST
ಬೆಳಗಾವಿಯ ಗಡಿ ಪ್ರವೇಶಿಸಲು ಗುರುವಾರ ಯತ್ನಿಸಿದ ಶಿವಸೇನಾ ಕಾರ್ಯಕರ್ತರನ್ನು ಶಿನ್ನೋಳಿ ಬಳಿ ಪೊಲೀಸರು ತಡೆದರು
ಬೆಳಗಾವಿಯ ಗಡಿ ಪ್ರವೇಶಿಸಲು ಗುರುವಾರ ಯತ್ನಿಸಿದ ಶಿವಸೇನಾ ಕಾರ್ಯಕರ್ತರನ್ನು ಶಿನ್ನೋಳಿ ಬಳಿ ಪೊಲೀಸರು ತಡೆದರು   

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿರುವುದನ್ನು ಖಂಡಿಸಿ, ಅದನ್ನು ತೆರವುಗೊಳಿಸಿ ಭಗವಾಧ್ವಜ ಹಾರಿಸುವ ಉದ್ದೇಶದಿಂದ ಗುರುವಾರ ಬರುತ್ತಿದ್ದ ನೆರೆಯ ಮಹಾರಾಷ್ಟ್ರದ ಶಿವಸೇನಾ ಕಾರ್ಯಕರ್ತರನ್ನು ರಾಜ್ಯದ ಪೊಲೀಸರು ಗಡಿಯಲ್ಲೇ ತಡೆದರು.

ರಾಜ್ಯದ ಗಡಿ ತಾಲ್ಲೂಕಿನ ಶಿನ್ನೋಳಿಯಲ್ಲಿ ಸೇರಿದ್ದ ಅವರು, ಗಡಿಯಲ್ಲಿ ತಮ್ಮನ್ನು ತಡೆದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ಜಟಾಪಟಿ ನಡೆಸಿದರು. ಪೊಲೀಸರನ್ನು ತಳ್ಳಾಡಿ ಉದ್ಧಟತನದಿಂದ ವರ್ತಿಸಿದರು.

‘ಪಾಲಿಕೆ ಮುಂಭಾಗದ ಕನ್ನಡ ಧ್ವಜವನ್ನು ಕೂಡಲೇ ತೆರವುಗೊಳಿಸಬೇಕು.ಇಲ್ಲವಾದಲ್ಲಿ ನಾವು ಬೆಳಗಾವಿ ಮಹಾನಗರಪಾಲಿಕೆ ಎದುರು ಭಗವಾಧ್ವಜ ಸ್ಥಾಪಿಸುತ್ತೇವೆ’ ಎಂದು ‘ಜೈ ಭವಾನಿ, ಜೈ ಶಿವಾಜಿ’ ಎಂಬ ಘೋಷಣೆಗಳೊಂದಿಗೆ ನುಗ್ಗುತ್ತಿದ್ದರು. ಶಿವಸೇನಾ ಕೊಲ್ಹಾಪುರ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ದಾವಣೆ ನೇತೃತ್ವದಲ್ಲಿ ಕಾರ್ಯಕರ್ತರು ಕೊಲ್ಹಾಪುರ ಜಿಲ್ಲೆಯ ಚಂದಗಡ ತಾಲ್ಲೂಕಿನ ಕಡೆಯಿಂದ ಬಂದು ಜಮಾಯಿಸಿದ್ದರು. ಮುನ್ಸೂಚನೆ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು, ಆ ಕಾರ್ಯಕರ್ತರನ್ನು ತಡೆ
ದರು. ಹೀಗಾಗಿ, ಅರ್ಧ ಗಂಟೆಯವರೆಗೆ ರಸ್ತೆಯಲ್ಲೇ ಪ್ರತಿಭಟಿಸಿ ಮರಳಿದರು. ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ.

ADVERTISEMENT

ಈ ನಡುವೆ, ಕೋನೆವಡಿ ಗ್ರಾಮದಲ್ಲಿ ಶಿವಸೇನಾದವರು ಭಗವಾಧ್ವಜ ಹಾರಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ
ಪಡಿಸಿದರು.

ನಗರದಲ್ಲಿ, ಮಹಾರಾಷ್ಟ್ರ ಏಕೀಕರಣ ಸಮಿತಿಯವರು ಕೈಗೊಂಡಿದ್ದ ಮೆರವಣಿಗೆಯನ್ನು ಪೊಲೀಸರ ಅನುಮತಿ ಸಿಗದ ಕಾರಣ ಮುಂದೂಡಿದರು. ಪೊಲೀಸ್ ಅಧಿಕಾರಿಗಳ ಸಲಹೆಯಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರೊಂದಿಗೆ ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.