ADVERTISEMENT

ಕುಲಕಸುಬು, ಗಣಿಗಾರಿಕೆಗೆ ಅಡ್ಡಿಪಡಿಸಿದರೆ ಕ್ರಮ: ಸಚಿವ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 16:22 IST
Last Updated 12 ಫೆಬ್ರುವರಿ 2026, 16:22 IST
<div class="paragraphs"><p>ಶಿವರಾಜ ತಂಗಡಗಿ</p></div>

ಶಿವರಾಜ ತಂಗಡಗಿ

   

ಬೆಂಗಳೂರು: ‘ಭೋವಿ (ವಡ್ಡರ) ಜನಾಂಗ ಪಾರಂಪರಿಕ ಕುಲಕಸುಬು ಮುಂದುವರಿಸಲು, ಗಣಿಗಾರಿಕೆ ಮಾಡಲು ಅಡ್ಡಿಪಡಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಸಮ್ಮುಖದಲ್ಲಿ ಸಮುದಾಯದ ಮುಖಂಡರ ಜೊತೆ ಗುರುವಾರ ಸಭೆ ನಡೆಸಿದ ಸಚಿವರು, ‘ಭೋವಿ ಜನಾಂಗದವರು ಒರಳಕಲ್ಲು, ಬೀಸುವ ಕಲ್ಲು, ದಿಂಡು, ಜಲ್ಲಿಕಲ್ಲು, ಮೂರ್ತಿಗಳು, ದೇವರ ವಿಗ್ರಹಗಳ ಕೆತ್ತನೆ ಸೇರಿದಂತೆ ಕುಲಕಸುಬು ಮುಂದುವರಿಸಲು ಅನುಕೂಲ ಆಗುವಂತೆ ಕಾನೂನುಗಳನ್ನು ಸರಳೀಕರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಭೋವಿ ಜನಾಂಗದ ಮೇಲೆ ದಬ್ಬಾಳಿಕೆ, ಹಲ್ಲೆ, ಕೊಲೆ ಬೆದರಿಕೆ ನಡೆಯುತ್ತಿವೆ. ಕೆಲವು ಕಡೆ ಅಧಿಕಾರಿಗಳು ಬಂಡವಾಳಶಾಹಿಗಳ ಜೊತೆ ಸೇರಿ ಜನಾಂಗಕ್ಕೆ ಸಿಗಬೇಕಾದ ಗಣಿಗಾರಿಕೆ ತಪ್ಪಿಸುತ್ತಿದ್ದು, ಅಂಥವರ ವಿರುದ್ಧ ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌ಗಳು, ಉಪನಿರ್ದೇಶಕರು ಕ್ರಮ ತೆಗೆದುಕೊಳ್ಳಬೇಕು’ ಎಂದು ಸಚಿವರು ನಿರ್ದೇಶನ ನೀಡಿದರು.

ಏಕಗವಾಕ್ಷಿ ಅಡಿಯಲ್ಲಿ ಅರ್ಜಿ ಸಲ್ಲಿಸುವ ಭೋವಿ ಜನಾಂಗದವರಿಗೆ ಜಿಲ್ಲಾಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ತಲಾ ಎರಡು ಎಕರೆ ಕ್ವಾರಿ ಮಂಜೂರು ಮಾಡಬೇಕು. ಕಲ್ಲು ಕುಟಿಕರ ಸಹಕಾರ ಸಂಘಗಳಿಗೆ ತಲಾ 5 ಎಕರೆ ಜಮೀನು ನೀಡಬೇಕು ಎಂದು ಸಭೆಯಲ್ಲಿ ಮುಖಂಡರು ಆಗ್ರಹಿಸಿದರು.

ರೋಹಿಣಿ ಸಿಂಧೂರಿ ಮಾತನಾಡಿ, ‘ಭೋವಿ ಜನಾಂಗದವರ ಕುಲಕಸುಬಿಗೆ ತೊಂದರೆ ಆಗದಂತೆ ನಿಗಾ ವಹಿಸಲಾಗುವುದು. ಜಾತಿ ಪ್ರಮಾಣಪತ್ರ ನೀಡಿದ ಮೇಲೆ ಪರವಾನಗಿ ನೀಡಲು ಯಾವುದೇ ಅಧಿಕಾರಿ ತೊಂದರೆ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಗಣಿಗಾರಿಕೆಗೆ ಜಿಲ್ಲಾಮಟ್ಟದಲ್ಲಿಯೇ ಅನುಮತಿ ನೀಡಲಾಗುವುದು. ಕೆಲಸ ಮಾಡುವ ಸ್ಥಳಗಳಲ್ಲಿ ಅರ್ಜಿ ಸಲ್ಲಿಸುವ ಭೋವಿ ಜನಾಂಗದವರಿಗೆ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಸಮುದಾಯದ ಬೇಡಿಕೆಗಳ ಮನವಿ ಪತ್ರವನ್ನು ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವಿ. ಕೃಷ್ಣಪ್ಪ, ಮೈಸೂರು ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ಎಸ್. ವಿಜಯಕುಮಾರ್ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.