ADVERTISEMENT

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 15:32 IST
Last Updated 20 ಡಿಸೆಂಬರ್ 2025, 15:32 IST
ಶೋಭಾ ಕರಂದ್ಲಾಜೆ 
ಶೋಭಾ ಕರಂದ್ಲಾಜೆ    

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು ದ್ವೇಷ ಭಾಷಣ ಮತ್ತು ದ್ವೇಷಾಪರಾಧ ತಡೆ ಮಸೂದೆ ಹೆಸರಿನಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಜಾರಿಗೆ ಮುಂದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿಪಕ್ಷಗಳ ಭಾರಿ ವಿರೋಧದ ಮಧ್ಯೆ ಸರ್ಕಾರವು ವಿಧಾನಮಂಡಲದಲ್ಲಿ ಈ ಮಸೂದೆಗೆ ಅಂಗೀಕಾರ ಪಡೆದುಕೊಂಡಿದೆ. ಆದರೆ ಈ ಮಸೂದೆಗೆ ಅಂಕಿತ ಹಾಕಬೇಡಿ ಎಂದು ಕೋರಿ, ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ’ ಎಂದು ಹೇಳಿದರು.

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಈ ಸರ್ಕಾರ ಮಾಡುತ್ತಲೇ ಇದೆ. ಫ್ಯಾಕ್ಟ್‌ಚೆಕ್‌ ಹೆಸರಿನಲ್ಲಿ ಜನರ ಬಾಯಿಮುಚ್ಚಿಸಲು ಏಜೆನ್ಸಿ ಒಂದನ್ನು ತೆರೆದಿದೆ. ಸಚಿವ ಪ್ರಿಯಾಂಕ್‌ ಖರ್ಗೆ ಅವರ ಆಪ್ತರು, ಖಾಸಗಿ ವ್ಯಕ್ತಿಗಳು, ಸರ್ಕಾರದ ಪರವಾದ ಸಂಸ್ಥೆಗಳನ್ನು ಈ ಏಜೆನ್ಸಿಯಲ್ಲಿ ಕೂರಿಸಿದೆ. ಅದರ ಮುಂದುವರೆದ ಭಾಗವಾಗಿ ಈ ಮಸೂದೆ ತರುತ್ತಿದೆ’ ಎಂದು ದೂರಿದರು.

ADVERTISEMENT

‘ಫ್ಯಾಕ್ಟ್‌ಚೆಕ್‌ ಏಜೆನ್ಸಿಯಲ್ಲಿ ಟೊಯೊಲಿಕಾ ಟೆಕ್ನಾಲಜೀಸ್‌ನ ಸಾಗರ್‌ ಮಿಶ್ರಾ, ರಾಜ್‌ಟೆಲ್‌ನ ಗೋವಿಂದ ರೆಡ್ಡಿ, ಸೈಕತ್ ರಾಯ್‌, ಗೌರಿ ಮೀಡಿಯಾ ಟ್ರಸ್ಟ್‌ನ ಗುರುಪ್ರಸಾದ್‌ ಡಿ.ಎನ್‌. ಮತ್ತು ನ್ಯೂಸ್‌ ಪ್ಲಸ್‌ನ ಪುನೀತ್‌ ಇದ್ದಾರೆ. ಸರ್ಕಾರದ ವಿರುದ್ಧ ಮಾತನಾಡಿದರೆ, ಇವರು ಸರ್ಕಾರಕ್ಕೆ ವರದಿ ಕೊಡುತ್ತಾರೆ. ಆಗ ಸರ್ಕಾರ ಪ್ರಕರಣ ದಾಖಲಿಸುತ್ತಿದೆ. ನಮ್ಮ ಹಲವು ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.