ಶೋಭಾ ಕರಂದ್ಲಾಜೆ
ಬೆಂಗಳೂರು: ‘ಆರ್ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಸಂಭವಿಸಿದ ಪ್ರಕರಣದ ಕುರಿತು ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು. ಪ್ರಕರಣದ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಸಿದ್ಧ ಎಂದು ಹೈಕೋರ್ಟ್ಗೆ ಸರ್ಕಾರ ತಿಳಿಸಲಿ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲೆಸೆದರು.
‘ಸರ್ಕಾರದ ತಪ್ಪಿಲ್ಲ ಎಂದಾದರೆ ಕಮಿಷನರ್ ಅವರನ್ನು ಅಮಾನತು ಮಾಡಿದ್ದೇಕೆ? ನಟ ಅಲ್ಲು ಅರ್ಜುನ್ ಕಾರ್ಯಕ್ರಮದಲ್ಲಿ ಒಬ್ಬರು ಸತ್ತಾಗ ಅಲ್ಲು ಅರ್ಜುನ್ ಅವರನ್ನು ಮನೆಯಿಂದ ಎಳೆದುಕೊಂಡು ಬರಲಾಗಿತ್ತು. ಅಲ್ಲಿಯಂತೆ ಇಲ್ಲಿ ಯಾಕೆ ಆಗುತ್ತಿಲ್ಲ? ಎಲ್ಲದಕ್ಕೂ ಮೂಗು ತೂರಿಸುವ ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು.
ಘಟನೆಯಲ್ಲಿ ಗಾಯಗೊಂಡಿರುವ 70 ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮುಖ್ಯ ಕಾರ್ಯದರ್ಶಿ ಬಳಿ ಈ 70 ಜನರ ಮಾಹಿತಿ ಇಲ್ಲ. ಸರ್ಕಾರ ಎಲ್ಲವನ್ನೂ ಮುಚ್ಚಿ ಹಾಕುತ್ತಿದೆ’ ಎಂದು ದೂರಿದರು.
‘ನಾವು ಆಕ್ಷೇಪಿಸಿದ ಬಳಿಕ ನ್ಯಾಯಮೂರ್ತಿ ಮೈಕೆಲ್ ಡಿಕುನ್ಹ ಆಯೋಗವನ್ನು ಸರ್ಕಾರ ರಚಿಸಿದೆ. ಅವರು ಈಗಾಗಲೇ ಕೋವಿಡ್ ಹಗರಣಗಳ ಕುರಿತ ತನಿಖೆ ಮಾಡುತ್ತಿದ್ದಾರೆ. ಆ ವರದಿಯನ್ನು ಅವರು ಇನ್ನೂ ಕೊಟ್ಟಿಲ್ಲ. ಅವರಿಗೆ ಎರಡನೇ ಜವಾಬ್ದಾರಿ ಯಾಕೆ? ನಿವೃತ್ತ ನ್ಯಾಯಮೂರ್ತಿಯವರ ಕುರಿತು ನಮ್ಮದೇನೂ ವಿರೋಧ ಇಲ್ಲ. ಆದರೆ, ಅವರೊಬ್ಬರೇ ನಿಮಗೆ ಸಿಗುತ್ತಿದ್ದಾರೆಯೇ’ ಎಂದೂ ಕೇಳಿದ ಅವರು, ‘ಪ್ರಕರಣವನ್ನು ಮುಚ್ಚಿ ಹಾಕಲೆಂದೇ ಜಿಲ್ಲಾಧಿಕಾರಿ ಮತ್ತು ಮೈಕೆಲ್ ಡಿಕುನ್ಹ ಅವರಿಗೆ ತನಿಖೆಯನ್ನು ವಹಿಸಲಾಗಿದೆ’ ಎಂದು ಆರೋಪಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.