ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಭಯ ಕಾಡುತ್ತಿದೆ. ಚುನಾವಣೆ ಬಂದರೆ ಅವರಿಗೆ ಜೆಡಿಎಸ್ ಚಳಿ, ಜ್ವರ ಶುರುವಾಗುತ್ತದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರನ್ನುದ್ದೇಶಿಸಿ ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಚಳಿ, ಜ್ವರ ಬಿಡಿಸಿಕೊಳ್ಳಲು ಅವರು ಜೆಡಿಎಸ್ ಕುಟುಂಬ ರಾಜಕಾರಣ (ಜೆಡಿಎಫ್) ಎಂಬ ಹೊಸ ಔಷಧಿ ಬಳಸುತ್ತಾರೆ. ಅದು ಅವರನ್ನು ಉಳಿಸುವ ಟಾನಿಕ್. ಹಾಗಾದರೆ ಅವರದ್ದು ಎಸ್ಸಿಎಫ್ (ಸಿದ್ಧ ಸೂತ್ರಧಾರ ಕಾಂಗ್ರೆಸ್ ಫ್ಯಾಮಿಲಿ) ಅಲ್ಲವೆ’ ಎಂದು ಪ್ರಶ್ನಿಸಿದ್ದಾರೆ.
ಸುಳ್ಳು ಸ್ಲೋಗನ್ಗಳ ಸೃಷ್ಟಿಕರ್ತರಾದ ಅವರು ಮಂಡ್ಯದಲ್ಲಿ ಜಾತ್ಯತೀತ ತತ್ವ, ಆದರ್ಶಗಳಿಗೆ ಎಳ್ಳುನೀರು ಬಿಟ್ಟಿದ್ದಾರೆ. ಸಹಕಾರ ಸಚಿವರ ಸಹಾಯಕನನ್ನು ಗೆಲ್ಲಿಸಿಕೊಳ್ಳಲು ‘ಜಾತಿ ಸಹಕಾರ’ಕ್ಕೆ ಮೊರೆ ಹೋಗಿದ್ದಾರೆ. ಮೈಸೂರಿನಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಬಿಜೆಪಿಗೇ ಹಾಕಿಸಲು ಹೊರಟಿದ್ದಾರೆ. ಅದಕ್ಕಾಗಿ
ಜಾತ್ಯತೀತ ಜಗಜಟ್ಟಿ ‘ಸಂದೇಶ ಸನ್ನಿಧಿ’ಯಲ್ಲಿ ಕುಳಿತು ಫರ್ಮಾನು ಹೊರಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮತ ಫಸಲಿಗಾಗಿ ಜಾತಿ ರಾಜಕೀಯ ಮಾಡುತ್ತಿರುವ ನಕಲಿ ಜಾತ್ಯ
ತೀತ ಶೂರನ ಅಸಲಿ ರೂಪ ಕಳಚಿದೆ. ಮಂಡ್ಯದಲ್ಲಿ ಸಮುದಾಯದ ಹೆಸರಿ
ನಲ್ಲೇ ಮತ ಯಾಚನೆ ನಡೆಯುತ್ತಿದೆ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಟೀಕಿಸುವವರೇ ಈಗ ಸಹಕಾರ ಸಚಿವರ ಸಹಾಯಕನನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಇದು ಯಾರ ಲೆಕ್ಕ ಚುಕ್ತಾ ಮಾಡಲು? ಯಾವ ಒಳ ಒಪ್ಪಂದವಿದು? ಎಂದು ಕುಮಾರಸ್ವಾಮಿ ಕೇಳಿದ್ದಾರೆ.
ರಾಜಕೀಯ ಆರಂಭಿಸಿದ ಮಾತೃಪಕ್ಷವನ್ನೇ ಕ್ರೂರವಾಗಿ ಮುಳುಗಿಸಲು ಹೊರಟ ನಾಯಕರು, ಕೈ ಹಿಡಿದ ಸ್ವಪಕ್ಷವನ್ನೂ ಸ್ವಾಹಾ ಮಾಡುತ್ತಿದ್ದಾರೆ. ‘ವಿನಾಶಕಾಲೇ ವಿಪರೀತ ಸುಳ್ಳು!’. ಆ ಸುಳ್ಳುಗಳೇ ಅವರನ್ನು ಸುಡುತ್ತವೆ. ಆಟ ಈಗ ಆರಂಭವಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.