ಬೆಂಗಳೂರು: ಜನ ಪ್ರಕಾಶನ ಶನಿವಾರ ಆಯೋಜಿಸಿದ್ದ ಬರಗೂರು ರಾಮಚಂದ್ರಪ್ಪ ಸಂಪಾದಕತ್ವದ ‘ಕುವೆಂಪು ವಿಚಾರ ಕ್ರಾಂತಿ’ ಕೃತಿ ಜನಾರ್ಪಣೆ, ‘ಜನರ ಕಡೆಗೆ ವೈಚಾರಿಕ ನಡಿಗೆ’ ಮೂಲಕ ಕುವೆಂಪು ವಿಚಾರಾಂದೋಲನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿಕ ಅನುಭವದ ಬಾವಿ ನೀರಿನ ರೂಪಕದೊಂದಿಗೆ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಕಟ್ಟಿಕೊಟ್ಟರು.
ಕಥೆ ಹೀಗಿದೆ...
‘ನಾನು ಬಿಎಸ್ಸಿ ಓದುತ್ತಿದ್ದ ಸಮಯದಲ್ಲಿ ಮನೆಗೆ ಬೇಕಾದ ನೀರು ತುಂಬಿಸುವ ಕೆಲಸವನ್ನು ಅಪ್ಪ ನನ್ನಿಂದ ಮಾಡಿಸುತ್ತಿದ್ದ. ಮನೆಯ ಪಕ್ಕದ ಬಾವಿಗೆ ನೀರು ಸೇದಲು ಹೋಗುತ್ತಿದ್ದೆ. ಆ ನೀರಿನಲ್ಲಿ ಕಸಗಳೆಲ್ಲ ಸೇರಿಕೊಂಡಿರುತ್ತಿತ್ತು. ಬಿಂದಿಗೆಯನ್ನು ಮೇಲೆ ಕೆಳಗೆ ಮೇಲೆ ಕೆಳಗೆ ಮಾಡಿದಾಗ ಕಸಗಳೆಲ್ಲ ದೂರ ಸರಿಯುತ್ತಿತ್ತು. ತಿಳಿನೀರು ತೆಗೆಯಲು ಸುಲಭವಾಗುತ್ತಿತ್ತು. ಮತ್ತೆ ನೀರು ಸೇದಲು ಹೋದಾಗ ಕಸವೆಲ್ಲ ಹಾಗೇ ತುಂಬಿರುತ್ತಿತ್ತು. ನಮ್ಮ ಸಾಮಾಜಿಕ ವ್ಯವಸ್ಥೆಯೂ ಹೀಗೇ ಇದೆ. ಕುವೆಂಪು ಅಂಥವರು ಬಂದಾಗ ಜಾತಿ, ಮೌಢ್ಯ, ವರ್ಗ ಮುಂತಾದ ಕಸಗಳು ಸ್ವಲ್ಪ ಸರಿಯುತ್ತವೆ. ಸ್ವಲ್ಪ ಸಮಯ ಕಳೆದಾಗ ಮತ್ತೆ ಸೇರುತ್ತವೆ. ಹಾಗಾಗಿಯೇ ನಮ್ಮಲ್ಲಿ ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ಹೋಗಿಲ್ಲ. ಜನರಲ್ಲಿ ವೈಚಾರಿಕತೆ ಬೆಳೆದಿಲ್ಲ. ವೈಜ್ಞಾನಿಕ ದೃಷ್ಟಿಕೋನವೂ ಬೆಳೆದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.