ADVERTISEMENT

ಬಿಜೆಪಿಯವರು ಪರಿಶಿಷ್ಟರ ವಿರೋಧಿಗಳು: ಸಿದ್ದರಾಮಯ್ಯ ಕಿಡಿ

10 ವರ್ಷವಾದರೂ ಕೇಂದ್ರದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಕಾಯ್ದೆ ಏಕೆ ತರಲಿಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 1:26 IST
Last Updated 22 ಆಗಸ್ಟ್ 2025, 1:26 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ಅಧಿಕಾರಕ್ಕೆ ಬಂದು 10 ಕಳೆದರೂ ಕೇಂದ್ರದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ ಹಣ ಮೀಸಲಿಡಲಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪ ಯೋಜನೆಯಡಿ ಅನುದಾನವಿಟ್ಟಿಲ್ಲ. ಬಿಜೆಪಿಯವರು ಬಡವರು ಹಾಗೂ ಪರಿಶಿಷ್ಟ ಸಮುದಾಯದವರ ವಿರೋಧಿಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

 ₹3,351.96 ಕೋಟಿ ಮೊದಲ ಮೊದಲ ಪೂರಕ ಅಂದಾಜಿಗೆ ಅನುಮೋದನೆ ಪಡೆಯುವ ವೇಳೆ, ಬಿಜೆಪಿ ತಕರಾರಿಗೆ ಉತ್ತರಿಸಿದ ಸಿದ್ದರಾಮಯ್ಯ ಹೀಗೆ ಟೀಕಿಸಿದರು. 

ADVERTISEMENT

ವಿಧಾನ ಪರಿಷತ್‌ನಲ್ಲಿ ಧನವಿನಿಯೋಗ ಮಸೂದೆ ಮೇಲಿನ ಚರ್ಚೆಯಲ್ಲಿ, ‘ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಗಿರಿಜನ ಉಪ ಯೋಜನೆಯಡಿ (ಟಿಎಸ್‌ಪಿ) ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ವಿನಿಯೋಗಿಸಿಕೊಂಡಿದೆ. ಪರಿಶಿಷ್ಟರ ಅಭಿವೃದ್ಧಿಗೆ ಸಿಗಬೇಕಾದ ಹಣವನ್ನು ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗದ ವೆಚ್ಚಕ್ಕೂ ಬಳಸಿಕೊಂಡಿರುವುದು ವಿರೋಧ ನೀತಿ’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿಯ ರವಿಕುಮಾರ್‌, ಸಿ.ಟಿ. ರವಿ, ಭಾರತಿ ಶೆಟ್ಟಿ, ಕೇಶವಪ್ರಸಾದ್‌, ಜೆಡಿಎಸ್‌ನ ಶರವಣ ದೂರಿದರು.

‘ನಾನು ಮೊದಲು ಮುಖ್ಯಮಂತ್ರಿಯಾಗಿದ್ದಾಗ 2013ರಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಹಣ ಬಳಕೆಯಲ್ಲಿ ಅಲ್ಪಸ್ವಲ್ಪ ದೋಷವಾಗಿರಬಹುದು, ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ, ಬಿಜೆಪಿ ಆಡಳಿತರಿರುವ ಯಾವುದೇ ರಾಜ್ಯದಲ್ಲೂ ಇಂತಹ ಕಾಯ್ದೆ ಇಲ್ಲ. ಪೂರಕ ಅಂದಾಜು ಮಂಡಿಸಿದ ಮೇಲೆ ಚರ್ಚೆಯೇ ಇರುವುದಿಲ್ಲ. ನೀವು ರಾಜಕೀಯಕ್ಕಾಗಿ ಚರ್ಚೆ ಮಾಡಿ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದೀರಿ. ಚರ್ಚೆ ಅಪ್ರಯೋಜಕ’ ಎಂದು ಸಿದ್ದರಾಮಯ್ಯ ಹೇಳಿದರು.

ಅದಕ್ಕೆ ಸುಮ್ಮನಾಗದ ಬಿಜೆಪಿ ಸದಸ್ಯರು ಮತ್ತೆ ಸ್ಪಷ್ಟನೆ ಕೇಳಲು ಮುಂದಾದರು. ಸಭಾಪತಿ ಬಸವರಾಜ ಹೊರಟ್ಟಿ ಅದಕ್ಕೆ ಅವಕಾಶ ಕೊಡಲಿಲ್ಲ. ಆಗ, ‘ಕಾಂಗ್ರೆಸ್‌ ಪರಿಶಿಷ್ಟರ ವಿರೋಧಿ, ಗ್ಯಾರಂಟಿಗಳಿಗೆ ಎಸ್‌ಸಿಎಸ್‌ಪಿ–ಟಿಎಸ್‌ಪಿ ಹಣ ಬಳಸುವುದು ತಪ್ಪು. ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಿಸುತ್ತಿದ್ದೀರಿ’ ಎಂದು ದೂರಿದರು.

‘ಸಾಲ ಮಾಡದೆ ಬಜೆಟ್‌ ಮಂಡಿಸಲು ಸಾಧ್ಯವಿಲ್ಲ. ಎಲ್ಲ ರಾಜ್ಯಗಳೂ ಸಾಲ ಮಾಡುತ್ತವೆ. ನಾವು ಹಣಕಾಸು ನೀತಿಯ ಮಿತಿಯಲ್ಲಿಯೇ ಸಾಲ ಮಾಡಿದ್ದೇವೆ. ಕೇಂದ್ರ ಸರ್ಕಾರ ಸಾಲ ಮಾಡಿಲ್ಲವೇ? ₹200 ಲಕ್ಷ ಕೋಟಿ ಸಾಲ ಮಾಡಿದೆ. 2025–26ರಲ್ಲಿ ₹12 ಲಕ್ಷ ಕೋಟಿಯಷ್ಟು ಬಡ್ಡಿಯನ್ನೇ ಪಾವತಿಸಬೇಕಿದೆ. ನೀವು, ಬಿಜೆಪಿಯವರು ಪರಿಶಿಷ್ಟರ ವಿರೋಧಿ’ ಎಂದು ಸಿದ್ದರಾಮಯ್ಯ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.