ADVERTISEMENT

ಅವನ್ಯಾರೊ ಪುಣ್ಯಾತ್ಮನ ಸ್ಪೀಕರ್ ಮಾಡಿಬಿಟ್ಟಿದ್ದಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 18:58 IST
Last Updated 23 ಅಕ್ಟೋಬರ್ 2019, 18:58 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಾಗಲಕೋಟೆ: ‘ಅವನ್ಯಾರೊ ಒಬ್ಬ ಪುಣ್ಯಾತ್ಮನ ಸ್ಪೀಕರ್ ಮಾಡಿಬಿಟ್ಟಿದ್ದಾರೆ. ಅವನು ಹೊಸಬ ಏನೂ ಗೊತ್ತಿಲ್ಲ.. ವಿರೋಧ‍ಪಕ್ಷದ ನಾಯಕ ಜಾಸ್ತಿ ಮಾತಾಡುವಂಗಿಲ್ಲ. ಕುಳಿತುಕೊಳ್ರಿ ಅಂತಾನೆ. ರಾಜ್ಯದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದವರ ಸ್ಥಿತಿಗತಿ ಬಿಚ್ಚಿಡಲು ಬಿಡುತ್ತಿಲ್ಲ...

ಇದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಗುಳೇದಗಡ್ಡದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಏಕ ವಚನದಲ್ಲಿಮಾಡಿದ ವಾಗ್ದಾಳಿಯ ಪರಿ..

ರಾಜ್ಯದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಗೆ ಇಷ್ಟೇ ಮಾತನಾಡಿ ಅಂತಾ ಯಾರೂ ಹೇಳಿಲ್ಲ. ಇವನ್ಯಾರೊ ಹೇಳ್ತಾನೆ.. ನಾನು ಹೇಳಿದೆ, ನಾನು ಮಾತನಾಡುವವನೇ. ಕುಳಿತುಕೊಳ್ಳಿ ಅನ್ನೋಕೆ ಇವನ್ಯಾರು ಅಂದೆ. ಕೇಳಿದ್ರೆ ಕೇಳು ಇಲ್ಲಾಂದ್ರೆ ಬಿಡು ಎಂದು ತಿರುಗೇಟು ನೀಡಿದ್ದಾಗಿ ಹೇಳಿದರು.

ADVERTISEMENT

ಬಾದಾಮಿ ಜನರ ಆಶೀರ್ವಾದ:‘ನೀವು ನನಗೆ ಆಶೀರ್ವಾದ ಮಾಡಿ ನನ್ನನ್ನು ಎಂಎಲ್‌ಎ ಮಾಡದಿದ್ರೆ ನಾನೆಲ್ಲಿ ವಿರೋಧ ಪಕ್ಷದ ನಾಯಕ ಆಗ್ತಿದ್ದೆ. ಮೈಸೂರಿನಲ್ಲಿ ಸೋಲಿಸಿದಂತೆ ನೀವೂ (ಬಾದಾಮಿಯವರು) ಮಾಡಿದ್ದರೆ ನಾನು ಮನೆಯಲ್ಲಿರಬೇಕಿತ್ತು. ವಿರೋಧ ಪಕ್ಷದ ನಾಯಕ ಸ್ಥಾನ ಮಾಡಿದ ಶ್ರೇಯ ಬಾದಾಮಿ ಜನರಿಗೆ ಸೇರಬೇಕು‘ ಎಂದರು.

‘ರಾಜ್ಯದಲ್ಲಿ ಉಪಚುನಾವಣೆ ಮುಗಿದ ನಂತರ ಸರ್ಕಾರ ಬೀಳಲಿದೆ. ಈ ಸರ್ಕಾರದಲ್ಲಿ ನಿಮ್ಮ ಸಂಕಷ್ಟಕ್ಕೆ ಸ್ಪಂದನೆ ದೊರೆಯುತ್ತಿಲ್ಲ. ಮುಂದಿನ ಮಾರ್ಚ್–ಏಪ್ರಿಲ್ ವೇಳೆಗೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ. ಆಗ ನಿಮಗೆ ನ್ಯಾಯ ಕಲ್ಪಿಸಲಿದ್ದೇವೆ‘ ಎಂದು ನೆರೆ ಸಂತ್ರಸ್ತರಿಗೆ ಅಭಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.